ಚನ್ನಪಟ್ಟಣ(ಸೆ.03): ಮಳೆ ಬರಲಿಲ್ಲ ಎಂದು ಮೌಢ್ಯಕ್ಕೆ ಸಿಲುಕಿದ ಗ್ರಾಮಸ್ಥರು ಮೂರು ತಿಂಗಳ ಹಿಂದೆ ನಿಧನರಾಗಿದ್ದ ವ್ಯಕ್ತಿಯ ಗೋರಿಯನ್ನು ಬಗೆದು ಪೂಜೆ ಸಲ್ಲಿಸಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅರ್ಚಕರಾಗಿದ್ದ ರೇಣುಕಾರಾಧ್ಯ(68) ಮೇ ತಿಂಗಳಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಮೃತದೇಹವನ್ನು ಸಂಪ್ರದಾಯದಂತೆ ಸ್ವಂತ ಜಮೀನಿನಲ್ಲಿ ಹೂಳಲಾಗಿತ್ತು. ಮೃತರಿಗೆ ಚರ್ಮವ್ಯಾದಿ(ತೊನ್ನು) ಇದ್ದು ಇವರನ್ನು ಹೂತಿರುವ ಕಾರಣ ಮಳೆ ಬರುತ್ತಿಲ್ಲ ಎಂಬ ಮೌಢ್ಯಕ್ಕೆ ಗ್ರಾಮಸ್ಥರು ಕಟ್ಟು ಬಿದ್ದಿದ್ದಾರೆ.
ರಾತ್ರಿ ವೇಳೆ ಶವದ ತಲೆಯ ಭಾಗವನ್ನು ತೆಗೆದು ಪೂಜೆ ಸಲ್ಲಿಸಿ ಹಾಗೇ ಬಿಟ್ಟು ಹೋಗಿದ್ದಾರೆ. ಕಾಕತಾಳೀಯ ಎಂಬಂತೆ ಈ ಘಟನೆಯಾದ ಕೆಲವೇ ತಾಸಿನಲ್ಲಿ ಮಳೆಯಾಗಿದೆ. ಮೃತರ ಪುತ್ರ ಅಕ್ಕೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.