ಕಟೀಲು : ಯಕ್ಷಗಾನ ಕಲಾರಂಗದ 2023ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನವಂಬರ್ 18, ಶನಿವಾರ ಕಟೀಲು ದೇವಳದ ಸರಸ್ವತೀ ಸದನದಲ್ಲಿ ಸಂಜೆ ಜರಗಲಿದೆ. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಲಿರುವರು. ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ಕೆ. ವಾಸುದೇವ ಆಸ್ರಣ್ಣರು ಕಲಾವಿದರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿರುವರು. ಕಟೀಲು ದೇವಳದ ಆಡಳಿತ ಸಮಿತಿ ಅಧ್ಯಕ್ಷ ಕೆ. ಸನತ್ ಕುಮಾರ್ ಶೆಟ್ಟಿ, ಆನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಬೆಂಗಳೂರಿನ ಕೆ. ಸದಾಶಿವ ಭಟ್, ದುಬೈಯ ಪ್ರಭಾಕರ ಸುವರ್ಣ, ಕೆ.ಎಂ.ಭಟ್ ಕಡತೋಕಾ, ನಮ್ಮ ಕುಡ್ಲ ವಾಹಿನಿಯ ಲೀಲಾಕ್ಷ ಬಿ. ಕರ್ಕೇರಾ ಅಭ್ಯಾಗತರಾಗಿ ಪಾಲುಗೊಳ್ಳಲಿರುವರು. 21 ಮಂದಿ ಹಿರಿಯ ಕಲಾವಿದರಿಗೆ ತಲಾ ರೂ. 20,000 ನಗದು ಪುರಸ್ಕಾರದ ಪ್ರಶಸ್ತಿ, ರೂ. 50 ಸಾವಿರ ಮೊತ್ತದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು ಸೋಂದಾ ಶ್ರೀಸ್ವರ್ಣವಲ್ಲಿ ಮಠದ ಯಕ್ಷಶಾಲ್ಮಲಾ ಸಂಸ್ಥೆಗೆ ಹಾಗೂ ಯಕ್ಷಚೇತನ ಪ್ರಶಸ್ತಿ ಸಂಸ್ಥೆಯನ್ನು ಹಿರಿಯ ಕಾರ್ಯಕರ್ತರಾದ ವಿಜಯ ಕುಮಾರ್ ಮುದ್ರಾಡಿ ಇವರಿಗೆ ಪ್ರದಾನ ಮಾಡಲಾಗುವುದು. ಸಮಾರಂಭದ ಪೂರ್ವದಲ್ಲಿ ಅಪರಾಹ್ನ 3.00 ರಿಂದ ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ಇದರ ಯಕ್ಷಕಿಶೋರರಿಂದ ಯಕ್ಷಗಾನ ‘ಶಶಿಪ್ರಭಾ ಪರಿಣಯ’ ಪ್ರದರ್ಶನಗೊಳ್ಳಲಿದೆ. ಸಮಾರಂಭದ ಬಳಿಕ ರಾತ್ರಿ 7.00 ರಿಂದ ತೆಂಕು-ಬಡಗು-ಕರ್ನಾಟಕ ಶಾಸ್ತ್ರೀಯ ಸಂಗೀತಗಳ ಯಕ್ಷಗಾನ-ರಾಗ ಸಂಯೋಗ ಜರಗಲಿದೆ. ರಾತ್ರಿ 8.00 ರಿಂದ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ರೂಪಕ ಶ್ರೀ ಮನೋಹರ ಸ್ವಾಮಿ ಪರಾಕು ಪ್ರಸ್ತುತಗೊಳ್ಳಲಿದೆ ಎಂಬುದಾಗಿ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
©2021 Tulunada Surya | Developed by CuriousLabs