ಬೆಳ್ತಂಗಡಿ: ವಿಧಾನ ಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಇದೀಗ ಸಂತೆ ವ್ಯಾಪಾರ, ಬೀದಿ ಬದಿ ವ್ಯಾಪಾರದ ಮೇಲೆ ನಿರ್ಬಂಧ ಹೇರಿರುವ ಪ್ರಸಂಗ ಬೆಳ್ತಂಗಡಿಯಿಂದ ವರದಿಯಾಗಿದೆ.
ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳ ಶಕ್ತಿಪ್ರದರ್ಶನವಾಗುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸಂಚಾರ ಅವ್ಯವಸ್ಥೆ ಆಗುವ ಸಾಧ್ಯತೆ ಇರುವುದರಿಂದ ಬೆಳ್ತಂಗಡಿಯ ಚುನಾವಣಾಧಿಕಾರಿಯ ಕಾರ್ಯಾಲಯವು ಇಂತಹದ್ದೊಂದು ಪ್ರಕಟಣೆ ಹೊರಡಿಸಿದೆ.
ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20ರವರೆಗೆ ಅವಕಾಶ ಇದೆಯಾದರೂ ಏ.17ರಂದು ಬೆಳ್ತಂಗಡಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು ಈ ವೇಳೆ ಅಭ್ಯರ್ಥಿಗಳು ಸಾವಿರಾರು ಕಾರ್ಯಕರ್ತರು, ಬೆಂಬಲಿಗರೊಂದಿಗೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ಮಂಗಳೂರು, ಪುತ್ತೂರು, ಕಾಸರಗೋಡು, ಮಡಿಕೇರಿ, ಸುಳ್ಯ, ಬಂಟ್ವಾಳ, ಉಡುಪಿ, ಕಾರ್ಕಳ ಮೊದಲಾದ ನಗರಗಳಿಂದ ಧರ್ಮಸ್ಥಳಕ್ಕೆ, ಮಂಗಳೂರಿನಿಂದ ಚಿಕ್ಕಮಗಳೂರಿಗೆ ಸಾಗುವ ಬಸ್ ಗಳು ಇದೇ ರಸ್ತೆ ಮಾರ್ಗವಾಗಿ ಸಾಗಬೇಕಾಗಿದೆ. ಇನ್ನು ಧರ್ಮಸ್ಥಳಕ್ಕೆ ಸೋಮವಾರದಂದು ಸಹಜವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಬರುತ್ತಾರೆ. ಹೀಗಾಗಿ ಈ ಸಂದರ್ಭದಲ್ಲಿ ಬೆಳ್ತಂಗಡಿಯಲ್ಲಿ ಸಂಚಾರ ಅವ್ಯವಸ್ಥೆ ಉಂಟಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಬೆಳ್ತಂಗಡಿಯ ವಾರದ ಸಂತೆಯು ಸಹ ಸೋಮವಾರದಂದೇ ನಡೆಯಲಿರುವುದರಿಂದ ಪಟ್ಟಣದಲ್ಲಿ ಹೆಚ್ಚಿನ ಜನದಟ್ಟಣೆ ಇರುತ್ತದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಸೋಮವಾರ ಸಂತೆಯಲ್ಲಿನ ವರ್ತಕರು, ವ್ಯಾಪಾರಸ್ಥರು ಮತ್ತು ಬೀದಿಬದಿ ವ್ಯಾಪಾರಸ್ಥರು, ರಾಷ್ಟ್ರೀಯ ಹೆದ್ದಾರಿಯ ಸಂತೆಕಟ್ಟೆಯಿಂದ ಬಸ್ ನಿಲ್ದಾಣದವರೆಗೆ ಇಬ್ಬದಿಗಳಲ್ಲಿ ವ್ಯಾಪಾರ ವಹಿವಾಟು ಮಾಡುವುದನ್ನು ನಿಷೇಧಿಸಿ ಆದೇಶಿಸಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಹರೀಶ್ ಪೂಂಜಾ, ಕಾಂಗ್ರೆಸ್ ನಿಂದ ರಕ್ಷಿತ್ ಶಿವರಾಂ ಅವರು ಕಣಕ್ಕಿಳಿಯಲಿದ್ದಾರೆ.