Friday, July 26, 2024
spot_img
More

    Latest Posts

    ಮಂಗಳೂರು: ಕ್ಷೇತ್ರದ ಅಭಿವೃದ್ಧಿಗೆ 4 ದಶಕಗಳ ದೂರದೃಷ್ಟಿತ್ವದ ಕಾರ್ಯಯೋಜನೆ – ಸ್ಪೀಕರ್ ಯು.ಟಿ. ಖಾದರ್

    ಮಂಗಳೂರು: ನನ್ನ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ 40-50 ವರ್ಷಗಳಿಗೆ ಬೇಕಾಗಿರುವ ಮೂಲ ಸೌಕರ್ಯಗಳ ಅಭಿವೃದ್ಧಿಗೆ ದೂರದೃಷ್ಟಿತ್ವದ ಕಾರ್ಯಯೋಜನೆಯನ್ನು ರೂಪಿಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ವಿದ್ಯುತ್‌, ನೀರು, ರಸ್ತೆ ಹಾಗೂ ಶಾಂತಿಯ ವಾತಾವರಣ ಈ ನಾಲ್ಕು ಸಂಗತಿಗಳಿಗೆ ಆದ್ಯತೆ ನೀಡಿದ ಅಭಿವೃದ್ಧಿಯ ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದರು. ತೊಕ್ಕೊಟ್ಟು, ಕೊಣಾಜೆ, ಕೋಟೆಕಾರು ವಿದ್ಯುತ್ ಉಪ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಈ ಮೂಲಕ ಉಳ್ಳಾಲ, ಕೊಣಾಜೆ, ಕೋಟೆಕಾರುಗಳಲ್ಲಿ ವಿದ್ಯುತ್‌ ಕೊರತೆಯಾದಲ್ಲಿ ಜೆಪ್ಪು ಭೂಗತ ಕೇಬಲ್‌ನಿಂದ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುತ್ತದೆ. ವಿದ್ಯುತ್‌ ಉಪಕೇಂದ್ರ ನಿರ್ಮಾಣದೊಂದಿಗೆ ಆಡಳಿತಾತ್ಮಕ ಸಿಬ್ಬಂದಿ ನೇಮಕಕ್ಕೂ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು. ದಿನದ 24 ಗಂಟೆಗಳ ಕಾಲ ನೀರು ಪೂರೈಕೆಗೆ ಸಜಿಪದಿಂದ ಕೊಣಾಜೆಗೆ ಮುಖ್ಯ ಪೈಪ್‌ಲೈನ್ ಕಾಮಗಾರಿ ನಡೆಸಲಾಗುತ್ತಿದೆ. 2ನೇ ಹಂತದಲ್ಲಿ ಟ್ಯಾಂಕ್ ನಿರ್ಮಾಣ, ನೀರು ಪೂರೈಕೆ ಮಾಡಲಾಗುವುದು. ತುಂಬೆ ಹೊಸ ಅಣೆಕಟ್ಟೆಯಲ್ಲಿ ನೀರಿನ ಕೊರತೆಯಾದಲ್ಲಿ ಸಮೀಪದ ಹರೇಕಳ ಅಣೆಕಟ್ಟೆಯಿಂದ ಸಿಹಿನೀರು ಪಡೆಯಲು ಸಾಧ್ಯವಿದೆ. ಇಲ್ಲಿ ಯಥೇಚ್ಛ ನೀರಿನ ಸಂಗ್ರಹ ಇದೆ. ಆದರೆ, ಪಾಲಿಕೆ ಇದಕ್ಕೆ ಮನಸ್ಸು ಮಾಡಿ, ಅಗತ್ಯವಿರುವ ಕಾಮಗಾರಿ ಮಾಡಿಕೊಳ್ಳಬೇಕು ಎಂದು ಹೇಳಿದರು. ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಯಾವುದೇ ಕುಗ್ರಾಮದಿಂದ ಕನಿಷ್ಠ 30 ನಿಮಿಷಗಳಲ್ಲಿ ಮಂಗಳೂರು ತಲುಪಬಹುದು. ಕೋಟೆಪುರದಿಂದ ಬೋಳಾರಕ್ಕೆ ಸೇತುವೆ ನಿರ್ಮಿಸುವ ಸಂಬಂಧ ಕಾರ್ಯಸಾಧ್ಯತಾ ವರದಿ ರೂಪಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ಅಂದಾಜು 150 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಇದಕ್ಕೆ ಅನುಮತಿ ದೊರೆತರೆ, ಮಂಗಳೂರಿನ ಚಿತ್ರಣವೇ ಬದಲಾಗಬಹುದು. ಮಂಗಳೂರಿನ ಶೇ.50ರಷ್ಟು ವಾಹನ ದಟ್ಟಣೆ ಕಡಿಮೆಯಾಗುತ್ತದೆ. ಉಳ್ಳಾಲ– ಕೋಟೆಪುರ ನಡುವೆ ಸಣ್ಣ ಬೋಟ್‌ಗಳ ನಿಲುಗಡೆಗೆ ಮಿನಿ ಜೆಟ್ಟಿ ನಿರ್ಮಾಣ, ನಾವೂರು– ಉಳಿಯ ಪಾವೂರು ನಡುವೆ ತೂಗು ಸೇತುವೆ ನಿರ್ಮಾಣದ ಬಗ್ಗೆ ಯೋಚಿಸಲಾಗಿದೆ ಎಂದು ಖಾದರ್ ಹೇಳಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss