ಮಂಗಳೂರು: ಮುಂಬೈ ಉದ್ಯಮಿ ಐಕಳ ಹರೀಶ್ ಶೆಟ್ಟಿ ಅವರ ಮನೆಯಿಂದ ಕಳವಾಗಿದ್ದ ಕೋಟ್ಯಂತರ ಮೌಲ್ಯದ ಚಿನ್ನಾಭರಣದ ಪೈಕಿ 1kg 5 ಗ್ರಾಂ ಚಿನ್ನ ಮತ್ತು ಇಬ್ಬರು ಆರೋಪಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
2023ರ ಜನವರಿ 15ರಂದು ರಾತ್ರಿ ಕಿನ್ನಿಗೋಳಿಯ ಐಕಳದ ತಾಳಿಪ್ಪಾಡಿಯಲ್ಲಿರುವ ಹೆಸರಾಂತ ಉದ್ಯಮಿ ಹರೀಶ್ ಶೆಟ್ಟಿ ಅವರ ಮನೆಯಲ್ಲಿ ಕಳವು ಕೃತ್ಯ ನಡೆದಿತ್ತು. ಮನೆಯ ಹೊರಗೆ ನಿಲ್ಲಿಸಿದ್ದ ಪಜೆರೋ ಕಾರನ್ನು ಕಳವುಗೈಯಲು ನಾಲ್ವರಿದ್ದ ತಂಡ ಹೊಕ್ಕಿತ್ತು. ಈ ವೇಳೆ, ಮನೆಯಲ್ಲಿ ಯಾರೂ ಇರಲಿಲ್ಲ. ಮದುವೆಯ ನಿಮಿತ್ತ ಹರೀಶ್ ಶೆಟ್ಟಿ ಕುಟುಂಬ ಊರಿಗೆ ಬಂದು ಮುಂಬೈಗೆ ಮರಳಿತ್ತು. ಕಾರಿನ ಕೀ ಪಡೆಯುವುದಕ್ಕಾಗಿ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿದ್ದರು. ಮನೆಯ ಕಪಾಟು ಒಡೆದು ನೋಡಿದಾಗ, ಚಿನ್ನದ ಆಭರಣಗಳ ರಾಶಿಯೇ ಸಿಕ್ಕಿತ್ತು. ಆರೋಪಿಗಳು ಸದ್ದಿಲ್ಲದೆ, ಬಂದಿದ್ದ ಕಾರಿನಲ್ಲೇ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.
ಕೃತ್ಯದ ಬಗ್ಗೆ ಮುಲ್ಕಿ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡಿದ್ದ ಮಂಗಳೂರು ಸಿಸಿಬಿ ಪೊಲೀಸರು ನಾಲ್ವರ ಪೈಕಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಗಣೇಶ್ ನಾಯ್ಕ್ (26) ಮತ್ತು ವಿರಾಜಪೇಟೆ ತಾಲೂಕಿನ ಸಿದ್ಧಾಪುರ ಗ್ರಾಮದ ನಿವಾಸಿ ರಂಜಿತ್ ಕೆ.ಆರ್.(26) ಬಂಧಿತರು. ಇವರನ್ನು ಬೆಂಗಳೂರಿನಿಂದ ವಶಕ್ಕೆ ಪಡೆದಿದ್ದು 1kg 5 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ಸುಮಾರು 56.50 ಲಕ್ಷ ಆಗಬಹುದು ಎಂದು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ತಿಳಿಸಿದ್ದಾರೆ.
ಕಳವು ಸಂದರ್ಭದಲ್ಲಿ ಐಕಳ ಹರೀಶ್ ಶೆಟ್ಟಿಯವರು 2kg ಚಿನ್ನ ಕಳವು ಆಗಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದರು. ಇನ್ನಿಬ್ಬರು ಆರೋಪಿಗಳು ಕೇರಳದಲ್ಲಿ ಅವಿತುಕೊಂಡಿದ್ದಾರೆ ಎನ್ನಲಾಗುತ್ತಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಆರೋಪಿ ಗಣೇಶ್ ನಾಯ್ಕ್ ಮತ್ತು ಇತರ ಇಬ್ಬರು ಆರೋಪಿಗಳು ಮಂಗಳೂರಿನ ಕುಲಶೇಖರದ ಕೆಳರಾಯಿ ಚರ್ಚ್ ರಸ್ತೆಯಲ್ಲಿನ ಮನೆಯ ಬಾಗಿಲು ಒಡೆದು ಬೆಲೆಬಾಳುವ ವಸ್ತುಗಳನ್ನು ಕಳವು ನಡೆಸಿದ್ದರು. ಹಾಗೂ ಮಾರುತಿ ಬ್ರೀಜಾ ಕಾರನ್ನು ಕಳವು ಮಾಡಿದ್ದರು. ಪೊಲೀಸರ ತನಿಖೆಯಲ್ಲಿ ಈ ಕೃತ್ಯ ಕೂಡ ಪತ್ತೆಯಾಗಿದೆ. ಗಣೇಶ್ ನಾಯ್ಕ್ ವಿರುದ್ಧ ಈ ಹಿಂದೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು ಆನಂತರ ಅಲ್ಲಿನ ಜೈಲಿನಲ್ಲಿದ್ದಾಗ ಇತರ ಆರೋಪಿಗಳ ಸಂಪರ್ಕ ಆಗಿತ್ತು. ಜೈಲಿನಿಂದ ಹೊರಬಂದ ಬಳಿಕ ಉದ್ಯಮಿ ಹರೀಶ್ ಶೆಟ್ಟಿ ಮನೆಯಿಂದ ಕಳವಿಗೆ ಸಂಚು ನಡೆಸಿದ್ದರು. ಹರೀಶ್ ಶೆಟ್ಟಿ ಮನೆಯಲ್ಲಿ ಕಾವಲುಗಾರ ಮನೆಯ ಹಿಂಭಾಗದ ಕಟ್ಟಡದಲ್ಲಿ ಮಲಗಿದ್ದರು. ಕಳ್ಳರು ನುಗ್ಗಿ ಚಿನ್ನಾಭರಣ ಹೊತ್ತೊಯ್ದಿದ್ದು ಅವರಿಗೆ ತಿಳಿಯಲೇ ಇಲ್ಲ.