ಉಳ್ಳಾಲ: ದೇವಸ್ಥಾನಗಳ ಬಳಿಕ ಇದೀಗ ಕಳ್ಳರು ಮಸೀದಿಗೆ ನುಗ್ಗಲು ಪ್ರಾರಂಭಿಸಿದ್ದು ಉಳ್ಳಾಲದ ಮಸೀದಿಯೊಂದಕ್ಕೆ ನುಗ್ಗಿದ ಕಳ್ಳರು ಆರು ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿರುವ ಘಟನೆ ಇಂದು ನಸುಕಿನ ಜಾವ ನಡೆದಿದೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಕಾನ ಬದ್ರಿಯಾ ಜುಮಾ ಮಸೀದಿಯಲ್ಲಿ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಪಿಕ್ಕಾಸು ಬಳಸಿ ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿದ್ದಾರೆ. ಮಸೀದಿ ವಠಾರದಲ್ಲಿ ಅಳವಡಿಸಿದ್ದ ಆರು ಕಾಣಿಕೆ ಡಬ್ಬಿಗಳನ್ನು ಒಡೆದು ಹಾಕಲಾಗಿದೆ.
![](https://tulunadasurya.com/wp-content/uploads/2022/11/WhatsApp-Image-2022-11-02-at-3.04.44-PM-1.jpeg)
ಮಸೀದಿಯನ್ನು ದೋಚುವ ಮುನ್ನ ಅಥವಾ ನಂತರ ಕಳ್ಳರು ಶಾಲೆಯೊಳಗಡೆ ಕುಳಿತು ಪಾರ್ಟಿ ಮಾಡಿರುವ ಸೊತ್ತುಗಳು ಪತ್ತೆಯಾಗಿದೆ. ಮುಖಗವಚ, ಚಿಕನ್ ಟಿಕ್ಕಾ ಮಾಡುವ ಯಂತ್ರ, ಉಪ್ಪು ಹುಡಿ, ಖಾರದ ಹುಡಿ, ಗ್ಯಾಸ್ ಲೈಟರ್ ಎಲ್ಲವೂ ಶಾಲೆಯ ವಠಾರದಲ್ಲಿ ಕಂಡುಬಂದಿದೆ.
ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಳ್ಳಾಲ ಶಾಸಕ ಯು.ಟಿ ಖಾದರ್ ‘ತಕ್ಷಣವೇ ಆರೋಪಿಗಳನ್ನು ಪತ್ತೆಹಚ್ಚುವಂತೆ ಪೊಲೀಸ್ ಸೂಚಿಸಿದ್ದಾರೆ. ಪ್ರಕರಣ ಕುರಿತು ಪೊಲೀಸ್ ಕಮೀಷನರ್ ಜೊತೆಗೆ ಚರ್ಚಿಸುವುದಾಗಿಯೂ’ ತಿಳಿಸಿದರು. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://tulunadasurya.com/wp-content/uploads/2022/10/sudhakar-1-1024x854.jpg)