ಬಂಟ್ವಾಳ :ಬಂಟ್ವಾಳ ತಾ. ಕಾವಳಮೂಡೂರು ಗ್ರಾಮದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಸಾನ್ನಿಧ್ಯ ವೃದ್ಧಿಗಾಗಿ ಎರಡನೇ ಹಂತದ ಅಷ್ಟಮಂಗಳ ಪ್ರಶ್ನಾ ಚಿಂತನೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಪ್ರಧಾನ ದೈವಜ್ಞರಾಗಿ ಪಯ್ಯನ್ನೂರು ಜ್ಯೋತಿ ಸದನಂ ನಾರಾಯಣ ಪೊದುವಾಳ್ ಅವರು ಪ್ರಶ್ನಾ ಚಿಂತನೆ ನಡೆಸಿಕೊಟ್ಟರು. ಸಹ ಚಿಂತಕರಾಗಿ ಉಡುಪಿ ಗೋಪಾಲ ಜೋಯಿಸ ಅವರು ಭಾಗವಹಿಸಿದ್ದರು. ರೂಪೇಶ್ ಪೊದುವಾಳ್ ಮತ್ತಿತರರು ಸಹಕರಿಸಿದ್ದರು.
ದೇಗುಲದಲ್ಲಿ ನಡೆಯುತ್ತಿರುವ ಉತ್ಸವಾಗಳು, ಧಾರ್ಮಿಕ ಆಚರಣೆಗಳಲ್ಲಿ ತಪ್ಪು ಕಲ್ಪನೆಯಿಂದ ವ್ಯತ್ಯಾಸವಾಗಿದೆ. ಹಿಂದೆ ನಡೆಯುತ್ತಿದ್ದಂತಹ ಪದ್ಧತಿಗಳಿಗೂ, ನಂತರದ ಕಾಲದಲ್ಲಿ ನಡೆಸಲ್ಪಟ್ಟ ಆಚರಣೆಗಳಿಗೂ ವ್ಯತ್ಯಾಸ ಉಂಟಾಗಿದ್ದು, ಊರಿಗೆ ದೋಷ ಉಂಟಾಗಿದೆ.ಅದನ್ನು ಬದಲಿಸಿ ಮೊದಲಿನ ಸ್ಥಿತಿಗೆ ತರುವ ಅಗತ್ಯವಿದೆ ಎಂದು ಪ್ರಥಮ ದಿನದ ಚಿಂತನೆಯಲ್ಲಿ ಕಂಡು ಬಂದಿದೆ.
ಪಾರ್ವತಿ ಸನ್ನಿಧಿಯ ಬಗ್ಗೆ ಜಿಜ್ಞಾಸೆ ಕಂಡು ಬಂದಿದ್ದು, ಬದಲಾವಣೆಯ ಸಾಧ್ಯತೆ ಮುಂದಕ್ಕೆ ಪ್ರಶ್ನಾ ಚಿಂತನೆಯಲ್ಲಿ ತಿಳಿದು ಬರಬಹುದು ಎಂದು ತಿಳಿಸಿದ ದೈವಜ್ಞರು ತಿಳಿಸಿದರು. ಕ್ಷೇತ್ರದ ದೇವರ ಬಿಂಬವು ಪೂರ್ಣ ಪ್ರಮಾಣದಲ್ಲಿ ಪ್ರಕಾಶಿತವಾಗಿದ್ದು, ಸಾನ್ನಿಧ್ಯದಲ್ಲಿ ನಡೆಯುವ ವೈದಿಕ ವಿಧಿ,ವಿಧಾನಗಳಲ್ಲಿ ಲೋಪ ದೋಷ ಕಂಡುಬಂದಲ್ಲಿ ಅದನ್ನು ನಿವಾರಿಸುವುದು, ಆಂತರಿಕ ಮನಸ್ತಾಪಗಳು ಕೊನೆಗೊಂಡು ಶ್ರೀ ದೇವರಿಗೆ ಅನುಷ್ಠಾನಗಳು ಸರಿಯಾಗಿ ಸಲ್ಲಬೇಕು, ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು ಮೊದಲಾದ ಸಮಸ್ಯೆ, ಪರಿಹಾರೋಪಾಯಗಳು ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂತು.

ಗ್ರಾಮಣಿಗಳಾದ ಗಣಪತಿ ಮುಚ್ಚಿನ್ನಾಯ, ಸುಬ್ರಹ್ಮಣ್ಯ ಪೆರಾಡಿತ್ತಾಯ, ವೆಂಕಟರಮಣ ಎಳಚಿತ್ತಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು ಮತ್ತು ಸದಸ್ಯರು, ಅರ್ಚಕರಾದ ಮಿಥುನ್ರಾಜ್ ಭಟ್, ಜಯಶಂಕರ ಉಪಾಧ್ಯಾಯ, ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
