ಕಾರ್ಕಳ : ಸೋಮವಾರ ಸಂಜೆ ಬೀಸಿದ ಭಾರಿ ಗಾಳಿಮಳೆಗೆ ಶಾಲೆಯ ಹೆಂಚುಗಳು ಹಾರಿ ಹೋಗಿ 8 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಳ್ಳಾರೆ ಪರಿಸರದ ಜನಾರ್ಧನ ಅನುದಾನಿತ ಶಾಲೆಯಲ್ಲಿ ಸಂಭವಿಸಿದೆ.ಇಬ್ಬರು ವಿದ್ಯಾರ್ಥಿಗಳಿಗೆ ಗಂಭಿರ ಸ್ವರೂಪದ ಗಾಯಗಳಾದ್ರೆ 6 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡಿರುವ ಕಂಬ್ಳಮನೆ ಕುಕ್ಕುಜೆಯ ಸುಕನ್ಯಾ, ಬೈರಂಪಳ್ಳಿಯ ಪ್ರಶುಲ್ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಲೆಯ ಎರಡು ಕಟ್ಟಡಗಳ ಸುಮಾರು 500 ಕ್ಕೂ ಅಧಿಕ ಹೆಂಚುಗಳು ಗಾಳಿಯ ರಭಸಕ್ಕೆ ನೆಲಕ್ಕುರಳಿ ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಘಟನೆ ಕುರಿತು ಮಾಹಿತಿ ಪಡೆದ ಶಾಸಕ ಸುನಿಲ್ ಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಂಚಾಯತ್ ಸದಸ್ಯರಿಗೆ ಕರೆ ಮಾಡಿ ಪೂರಕ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಅನಂತ ಶಂಕರ್, ಬಿಇಒ ಭಾಸ್ಕರ್, ಅಜೆಕಾರು ಪೊಲೀಸ್ ಠಾಣೆ ಎಸ್ಐ ರವಿ ಬಿ.ಕೆ., ಕ್ರೈಮ್ ಎಸ್ಐ ಲಕ್ಷ್ಮಣ್, ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಖೇಶ್, ಪಿಡಿಒ ತಿಲಕ್ ರಾಜ್ ಮೊದಲಾದವರು ಭೇಟಿ ನೀಡಿದರು.
©2021 Tulunada Surya | Developed by CuriousLabs