ಹಿರಿಯಡ್ಕ: ಚಿನ್ನ ಪಾಲೀಶ್ ಮಾಡುವುದಾಗಿ ನಂಬಿಸಿ ಮೋಸ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಬಿಹಾರ ಮೂಲದ ಇಬ್ಬರನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಆನಂದ ಕಿಶೋರ್ ಮೆಹ್ತಾ (34) ಹಾಗೂ ಮನೋಜ್ ಯಾದವ್ (38) ಬಂಧಿತ ಆರೋಪಿಗಳು. ಇವರು ಶಾಂತಿಬೆಟ್ಟುವಿನ ಕಿಶೋರ್ ಎಂಬವರ ಮನೆಗೆ ಬಂದು, ಚಿನ್ನಕ್ಕೆ ಪಾಲಿಶ್ ಮಾಡಿಕೊಡುವುದಾಗಿ ಹೇಳಿದ್ದರು. ಇವರ ಬಗ್ಗೆ ಸಂಶಯಗೊಂಡ ಮನೋಜ್, ಹಿರಿಯಡ್ಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ಇದರಿಂದ ಸಿಟ್ಟುಗೊಂಡ ಅವರಿಬ್ಬರು ಕಿಶೋರ್ ಅವರಿಗೆ ಅವಾಚ್ಯ ಶಬ್ದ ಗಳಿಂದ ಬೈದು ಅಲ್ಲಿಂದ ಹೋಗಲು ಪ್ರಯತ್ನಿಸಿದ್ದರೆಂದು ತಿಳಿದುಬಂದಿದೆ.ಕಿಶೋರ್ ಕೂಡಲೇ ಅಲ್ಲೇ ಇದ್ದ ಪರಿಚಯದವರನ್ನು ಕರೆಸಿ ಅವರನ್ನು ಹಿಡಿದು, ಸ್ಥಳಕ್ಕೆ ಆಗಮಿಸಿದ ಹಿರಿಯಡ್ಕ ಠಾಣೆಯ ಪೊಲೀಸರಿಗೆ ಒಪ್ಪಿಸಿದರು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
