ಉಡುಪಿ: ಎನ್ಐಎ ದಾಳಿ ಖಂಡಿಸಿ ಉಡುಪಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಪಿ ಎಫ್ ಐ ಕಾರ್ಯಕರ್ತರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಪ್ರಸಂಗ ನಡೆಯಿತು. ಪ್ರತಿಭಟನೆಯ ಭಾಗವಾಗಿ ಸಂಜೆ ನಗರದ ಮಧ್ಯೆ ರಸ್ತೆ ತಡೆದು ಪಿ ಎಫ್ ಐ ಕಾರ್ಯಕರ್ತರ ನಡೆಗೆ ಪೊಲೀಸರು ಕೆಂಡಾಮಂಡಲಗೊಂಡರು. ಪೊಲೀಸರ ಅನುಮತಿ ಪಡೆಯದೇ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಪಿ ಎಫ್ ಐ ಕಾರ್ಯಕರ್ತರ ನಡೆಗೆ ಕುಪಿತಗೊಂಡ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.
ಇದಕ್ಕೂ ಮುನ್ನ ರಸ್ತೆಯಿಂದ ಹೋಗುವಂತೆ ಎಚ್ಚರಿಕೆ ನೀಡಿದರೂ ಕಾರ್ಯಕರ್ತರು ಜಗ್ಗಲೇ ಇಲ್ಲ. ಕೊನೆಗೆ ಪೊಲೀಸರು ಲಾಠಿ ಚಾರ್ಜ್ ನಡೆಸಿದಾಗ ಕಾರ್ಯಕರ್ತರು ಚದುರಿದರು. ಈ ವೇಳೆ ಹಲವು ಪಿ ಎಫ್ ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಸದ್ಯ ಸ್ಥಳದಲ್ಲಿ ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
