ಕೋಲ್ಕತಾ: ಆಂಬ್ಯುಲೆನ್ಸ್ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಕಾರ್ಮಿಕನೊಬ್ಬ ತನ್ನ ಮಗನ ಶವವನ್ನು ಚೀಲದಲ್ಲಿ ಸುಮಾರು 200 ಕಿಲೋಮೀಟರ್ ದೂರ ಸಾಗಿಸಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಸಿಲಿಗುರಿಯ ಕಲಿಯಾಗಂಜ್ ನಲ್ಲಿ ಈ ಘಟನೆ ನಡೆದಿದೆ.
ಸಿಲಿಗುರಿಯಿಂದ ಕಲಿಯಗಂಜ್ನಲ್ಲಿರುವ ಮನೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಚಾಲಕನ ಬೇಡಿಕೆಯಂತೆ ತನ್ನ ಬಳಿ 8,000 ರೂ.ಗಳಿಲ್ಲದ ಕಾರಣ ತನ್ನ ಐದು ತಿಂಗಳ ಮಗುವಿನ ಶವವನ್ನು ಚೀಲದಲ್ಲಿಟ್ಟುಕೊಂಡು ಪಶ್ಚಿಮ ಬಂಗಾಳದಲ್ಲಿ 200 ಕಿಲೋಮೀಟರ್ ದೂರ ಸಾರ್ವಜನಿಕ ಬಸ್ನಲ್ಲಿ ಪ್ರಯಾಣಿಸಿದ್ದೇನೆ ಎಂದು ಬಡ ವ್ಯಕ್ತಿ ಹೇಳಿಕೊಂಡಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ಮಗುವಿನ ತಂದೆ ಆಶಿಮ್ ದೇಬ್ಶರ್ಮಾ, ‘ಸಿಲಿಗುರಿಯ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆರು ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ನನ್ನ ಐದು ತಿಂಗಳ ಮಗ ಕಳೆದ ರಾತ್ರಿ ಸಾವನ್ನಪ್ಪಿದನು, ಈ ಸಮಯದಲ್ಲಿ ನಾನು 16,000 ರೂ ಖರ್ಚು ಮಾಡಿದೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ ನನ್ನ ಮಗುವನ್ನು ಕಲಿಯಾಗಂಜ್ಗೆ ಸಾಗಿಸಲು ಆಂಬ್ಯುಲೆನ್ಸ್ ಚಾಲಕ ಕೇಳಿದ 8,000 ರೂ.ಗಳನ್ನು ಪಾವತಿಸಲು ನನ್ನ ಬಳಿ ಹಣವಿರಲಿಲ್ಲ’ ಎಂದು ಹೇಳಿದ್ದಾರೆ.