ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಮೂರು ದಶಕಗಳ ಹಿಂದೆ ತಾನು ಮಾಡಿದ ಜೋಡಿ ಕೊಲೆ ಹಾಗೂ ಸುಲಿಗೆ ಕುರಿತು ಬಾಯ್ಬಿಟ್ಟು ಪೊಲೀಸರ ಅತಿಥಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಅವಿನಾಶ್ ಪವಾರ್(49) ಎಂದು ಗುರುತಿಸಲಾಗಿದ್ದು, ಈತನನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. 1993ರ ಅಕ್ಟೋಬರ್ ತಿಂಗಳಲ್ಲಿ ಅವಿನಾಶ್ ಪವಾರ್ ಹಾಗೂ ಆತನ ಇಬ್ಬರು ಸ್ನೇಹಿತರು ಪುಣೆಯ ಲೋನಾವಾಲಾದಲ್ಲಿರುವ ಮನೆಯೊಂದರಲ್ಲಿ ಕಳ್ಳತನ ಮಾಡುವ ವೇಳೆ ದಂಪತಿಗಳಿಬ್ಬರನ್ನು ಹತ್ಯೆ ಮಾಡಿದ್ದರು. ಬಳಿಕ ಪೊಲೀಸರು ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಅವಿನಾಶ್ ತನಿಖಾ ತಂಡದ ಕಣ್ತಪ್ಪಿಸಿ ದೆಹಲಿಗೆ ಪರಾರಿಯಾಗಿದ್ದ. ಕೆಲ ವರ್ಷಗಳ ಬಳಿಕ ಮಹಾರಾಷ್ಟ್ರದ ಔರಂಗಬಾದ್ಗೆ ಮರಳಿದ ಆರೋಪಿಯೂ ಅಮಿತ್ ಪವಾರ್ ಎಂಬ ಹೆಸರಲ್ಲಿ ಚಾಲನಾ ಪರವಾನಗಿಯನ್ನು ಸಹ ಪಡೆದ. ಆ ಬಳಿಕ ಮಹಾರಾಷ್ಟ್ರದ ಬೇರೆ ಬೇರೆ ನಗರಗಳಿಗೆ ವಲಸೆ ಹೋಗುತ್ತ ಕಡೆಯದಾಗಿ ಮುಂಬೈನ ವಿಕ್ರೋಲಿ ಪ್ರದೇಶದಲ್ಲಿ ಬಂದು ನೆಲೆಸಿದ್ದ.
ತಾನು ಪೊಲೀಸರ ಕೈಗೆ ಸಿಕ್ಕಿ ಬೀಳುವದಿಲ್ಲ ಎಂಬ ಧೈರ್ಯದ ಮೇಲೆ ಆರೋಪಿಯೂ ಕುಡಿದ ಮತ್ತಿನಲ್ಲಿ 30 ವರ್ಷಗಳ ಹಿಂದೆ ಮಾಡಿದ್ದ ಜೋಡಿ ಕೊಲೆ ಹಾಗೂ ಸುಲಿಗೆಯ ಕುರಿತು ತನ್ನ ಆಪ್ತರ ಬಳಿ ಬಾಯ್ಬಿಟ್ಟಿದ್ದಾನೆ. ಈ ವಿಚಾರವನ್ನು ವ್ಯಕ್ತಿಯೊಬ್ಬರು ಮುಂಬೈ ಕ್ರೈಂ ಬ್ರಾಂಚ್ನ ಅಧಿಕಾರಿ ದಯಾ ನಾಯಕ್ ಅವರಿಗೆ ಮಾಹಿತಿ ನೀಡಿದ್ಧಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮುಂಬೈ ಕ್ರೈಂ ಬ್ರಾಂಚ್ನ ಡಿಸಿಪಿ ರಾಜ್ ತಿಲಕ್ ರೋಶನ್ ಬಂಧಿತ ಆರೋಪಿ 30 ವರ್ಷಗಳ ಹಿಂದೆ ಕೊಲೆಯಾದ ದಂಪತಿಗಳ ಮನೆಯಿಂದ ಸ್ವಲ್ಪ ದೂರದಲ್ಲೇ ಅಂಗಡಿ ಒಂದನ್ನು ನಡೆಸುತ್ತಿದ್ದ. ಹತ್ಯೆ ಬಳಿಕ ಓಡಿ ಹೋಗಿದ್ದ ಆರೋಪಿಯೂ ತನ್ನ ಹೆಸರನ್ನು ಬದಲಾಯಿಸಿಕೊಂಡು ತಿರುಗುತ್ತಿದ್ದ. ಸ್ನೇಹಿತರ ಜೊತೆ ಪಾರ್ಟಿ ಮಾಡುವ ವೇಳೆ ಕುಡಿದ ಮತ್ತಿನಲ್ಲಿ ಆತ ಕೊಲೆ ಹಾಗೂ ಸುಲಿಗೆ ಮಾಡಿದ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ನಮಗೆ ಅವನ ಆಪ್ತರು ತಿಳಿಸಿದರು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಮುಂಬೈ ಕ್ರೈಂ ಬ್ರಾಂಚ್ನ ಡಿಸಿಪಿ ತಿಳಿಸಿದ್ದಾರೆ.