ಮಂಗಳೂರು: ಕಳೆದ 15 ದಿನಗಳಲ್ಲಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿರುವ 298 ಮಂದಿಯ ಚಾಲನಾ ಪರವಾನಿಗೆ (ಡಿಎಲ್)ಯನ್ನು ರದ್ದು ಮಾಡುವಂತೆ ನಗರ ಪೊಲೀಸ್ ಕಮಿಷನರ್ ಸಾರಿಗೆ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ನಿರಂತರ ಸಂಚಾರ ನಿಯಮ ಉಲ್ಲಂಘನೆ, ಅಜಾಗರೂಕತೆ, ನಿರ್ಲಕ್ಷ್ಯತನ ಚಾಲನೆ ಆರೋಪದ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮಂಗಳೂರು ನಗರ ಪೊಲೀಸ್ ಇಲಾಖೆ ಮುಂದಾಗಿದೆ. ಸುಪ್ರೀಂ ಕೋರ್ಟ್ ರಸ್ತೆ ಸುರಕ್ಷತಾ ಸಮಿತಿ ನಿರ್ದೇಶನದಂತೆ ಪ್ರತಿನಿತ್ಯ ಭಾರತೀಯ ದಂಡ ಸಂಹಿತೆ 1860 ಹಾಗೂ ಭಾರತೀಯ ಮೋಟಾರು ವಾಹನ ಕಾಯಿದೆ-1988/2019ರಡಿ ಆಗಸ್ಟ್ 6ರಿಂದ 20ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರ ಅನುಜ್ಞಾಪತ್ರ (ಡಿಎಲ್)ಗಳನ್ನು ಅಮಾನತುಪಡಿಸುವ ಬಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿ ಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಕಚೇರಿ ಪ್ರಕಟಣೆ ತಿಳಿಸಿದೆ. ಅತಿವೇಗ, ನಿರ್ಲಕ್ಷ್ಯದ ಚಾಲನೆ ಪ್ರಕರಣದಲ್ಲಿ 71 ಪ್ರಕರಣಗಳು, ಮದ್ಯಸೇವಿಸಿ ಚಾಲನೆ 20, ಗೂಡ್ಸ್ ವಾಹನದಲ್ಲಿ ಪ್ರಯಾಣಿಕರ ಸಾಗಾಟ 42, ಚಾಲನೆ ವೇಳೆ ಮೊಬೈಲ್ ಬಳಕೆ 4, ಸಿಗ್ನಲ್ ಜಂಪಿಂಗ್ ಪ್ರಕರಣ 10, ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣ 7, ಹೆಲ್ಮೆಟ್ ಹಾಕದೆ ವಾಹನ ಚಾಲನೆ 128, ಸೀಟ್ ಬೆಲ್ಟ್ ಹಾಕದೆ ಚಾಲನೆಯ 16 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಡಿಎಲ್ ರದ್ದು ಮಾಡಲು ಪೊಲೀಸ್ ಕಮಿಷನರ್ ಸಾರಿಗೆ ಕಚೇರಿ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಲ್ಲಿ ನಡೆದ ವಿಶೇಷ ಕಾರ್ಯಾಚರಣೆಯ ಮೂಲಕ ನಿಷೇಧಿತ ಸ್ಥಳದಲ್ಲಿ ಪಾರ್ಕಿಂಗ್ 593, ಕರ್ಕಶ ಹಾರ್ನ್ 106, ಟಿಂಟ್ ಗ್ಲಾಸ್ 70, ಹೆಚ್ಚು ಬಾಡಿಗೆ ಅಥವಾ ಸೂಚಿತ ಸ್ಥಳಕ್ಕೆ ಬಾಡಿಗೆ ಹೋಗದಿರುವ ಪ್ರಕರಣ 13, ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚಾರದ 28 ಪ್ರಕರಣಗಳು ದಾಖಲಾಗಿವೆ.
©2021 Tulunada Surya | Developed by CuriousLabs