ಮಂಗಳೂರು: ಅನಾಮಧೇಯ ವ್ಯಕ್ತಿಯೋರ್ವನು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರ ಮೊಬೈಲ್ ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯನ್ನೊಡ್ಡಿರುವ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ದಾಖಲಾಗಿದೆ. ಎಪ್ರಿಲ್ 20ರಂದು ಮಧ್ಯಾಹ್ನ 2.28ರ ಸುಮಾರಿಗೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ತಮ್ಮ ಕಚೇರಿಯಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರೊಂದಿಗೆ ಸಭೆ ನಡೆಸುತ್ತಿದ್ದರು. ಈ ವೇಳೆ 7353998242 ಮೊಬೈಲ್ ಸಂಖ್ಯೆಯಿಂದ ಜಿಲ್ಲಾಧಿಕಾರಿಯವರ ಮೊಬೈಲ್ ಗೆ ಕರೆ ಬಂದಿದೆ. ಜಿಲ್ಲಾಧಿಕಾರಿಯವರು ಕಾಲ್ ರಿಸೀವ್ ಮಾಡಿದಾಗ ಅತ್ತ ಕಡೆಯಿಂದ ಅಪರಿಚಿತ ವ್ಯಕ್ತಿಯೋರ್ವನು ಅನವಶ್ಯಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ ಜಿಲ್ಲಾಧಿಕಾರಿಯವರನ್ನು ಉದ್ದೇಶಿಸಿ ‘ಒಂದೂವರೆ ತಿಂಗಳ ಕಾಣಿಕೆ ನೀಡುತ್ತೇವೆ. ತಕ್ಷಣ ಓರ್ವ ಕೆಎಂಎಫ್ ಸಿಬ್ಬಂದಿಯನ್ನು ಮಂಗಳೂರಿನಿಂದ ತುಮಕೂರಿಗೆ ಕಳುಹಿಸಿಕೊಡಬೇಕು’ ಎಂದು ಬೆದರಿಕೆ ಒಡ್ಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
©2021 Tulunada Surya | Developed by CuriousLabs