ಮಂಗಳೂರು: ಉಳ್ಳಾಲ ಉಳಿಯ ಆಸುಪಾಸಿನಲ್ಲಿ ನೇತ್ರಾವತಿ ಹಿನ್ನೀರು ಪ್ರದೇಶದಲ್ಲಿ ಮತ್ತೆ ಮಾಲಿನ್ಯ ಸೇರಿಕೊಂಡಿದ್ದು, ಜಲಚರಗಳು ಸತ್ತು ಬಿದ್ದಿರುವುದನ್ನು ಅಲ್ಲಿನ ಮೀನುಗಾರರು ಮಾಧ್ಯಮದ ಗಮನ ಸೆಳೆದಿದ್ದಾರೆ.
2-3 ದಿನಗಳಿಂದ ಉಳಿಯ ಭಾಗದಲ್ಲಿ ಹಿನ್ನೀರಿನಲ್ಲಿ ನೀರು ಮಾಲಿನ್ಯಗೊಂಡಿದ್ದು, ಬಣ್ಣ ಬದಲಾಗಿದೆ. ಈ ಭಾಗದಲ್ಲಿ ನೂರಾರು ಮೀನುಗಳು ಸತ್ತು ಬಿದ್ದಿದ್ದು, ಮೀನುಗಾರರು ಆತಂಕಗೊಂಡಿದ್ದಾರೆ. ಉಳಿಯ ಪಕ್ಕದಲ್ಲಿಯೇ ಫಿಶ್ ಮೀಲ್ ಗಳಿದ್ದು ಅದರ ತ್ಯಾಜ್ಯವನ್ನು ನೇರವಾಗಿ ಕಡಲಿಗೆ ಬಿಡಲಾಗುತ್ತಿದ್ದು ಅದರಿಂದಾಗಿಯೇ ಸಮಸ್ಯೆ ಆಗಿದೆ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.
ಸ್ಥಳೀಯ ನಾಡದೋಣಿ ಮೀನುಗಾರ ಪ್ರೇಮಪ್ರಕಾಶ್ ಬಳಿ ಕೇಳಿದಾಗ, ಬಹಳಷ್ಟು ಮೀನುಗಳು ಸತ್ತು ಬಿದ್ದಿವೆ. ಆದರೆ ನಿಶ್ಚಿತವಾಗಿ ಇಂಥದ್ದೇ ಕಾರಣ ಎಂದು ಹೇಳಲಾಗದು. ಮಳೆಗಾಲ ಕಳೆದ ಬಳಿಕ ಸಿಹಿ ನೀರು ಹಿನ್ನೀರಿಗೆ ನುಗ್ಗಿದರೆ ಇಂತಹ ಸಮಸ್ಯೆ ಆಗುತ್ತದೆ. ಇಂತಹ ನೀರಿನಲ್ಲಿ ಆಮ್ಲಜನಕ ಕಡಿಮೆಯಿದ್ದರೆ ಮೀನುಗಳು ಸಾಯುತ್ತವೆ. ಇದರ ಜೊತೆಗೆ ಫಿಶ್ ಮೀಲ್ ಗಳ ತ್ಯಾಜ್ಯವೂ ಸೇರಿಕೊಂಡಿರುವ ಸಾಧ್ಯತೆ ಇದೆ. ಮೀನುಗಾರಿಕೆ ಇಲಾಖೆಗೆ ದೂರು ನೀಡಿದ್ದೇವೆ. ತಜ್ಞರು ಆಗಮಿಸಿದ್ದು ನೀರನ್ನು ಪರೀಕ್ಷೆಗೆ ಒಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ಎರಡು ದಿನದಲ್ಲಿ ಅಂದಾಜು 80 ಶೇಕಡಾದಷ್ಟು ಮೀನುಗಳು ಸತ್ತಿವೆ ಎನ್ನುತ್ತಿದ್ದಾರೆ. ಈ ಭಾಗದಲ್ಲಿ ಕಾಂಡ್ಲಾ ವನಗಳಿದ್ದು ಇದರ ಎಡೆಯಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುತ್ತವೆ. ಇಂತಹ ಜಾಗದಲ್ಲೇ ಮೀನುಗಳು ಸತ್ತಿರುವುದರಿಂದ ದೊಡ್ಡ ಮಟ್ಟಿನ ಪರಿಣಾಮ ಆಗಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.