ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದಂತ ವಿಧಾನಸಭೆಯ ಸ್ಪೀಕರ್ ಚುನಾವಣೆಗಾಗಿ ( Karnataka Assembly Speaker Election ) ಇಂದು ಶಾಸಕ ಯು.ಟಿ ಖಾದರ್ ( MLA UT Khadar ) ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ. ಈ ಮೂಲಕ ಅಧಿಕೃತವಾಗಿ ಕಣಕ್ಕೆ ಇಳಿಸಿದ್ದಾರೆ.
ವಿಧಾನಸಭೆಯ ಹಂಗಾಮಿ ಸ್ವೀಕರ್ ಆಗಿ ಹಿರಿಯ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆಯನ್ನು ನೇಮಕ ಮಾಡಲಾಗಿತ್ತು. ಅಲ್ಲದೇ ಮೇ.24ರಂದು ವಿಧಾನಸಭಾ ಸ್ಪೀಕರ್ ಆಯ್ಕೆಗಾಗಿ ಚುನಾವಣೆ ಕೂಡ ನಿಗಧಿ ಪಡಿಸಲಾಗಿತ್ತು.
ಬಹುತೇಕವಾಗಿ ವಿಧಾನಮಂಡಲದ ಸಭಾಧ್ಯಕ್ಷರ ಆಯ್ಕೆ ಅವಿರೋಧವಾಗಿಯೇ ಆಯ್ಕೆ ಮಾಡಲಾಗುತ್ತದೆ. ಇದೀಗ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿಎಂ ಸಿದ್ಧರಾಮಯ್ಯ ಅವರ ಮನವೊಲಿಕೆಯ ನಂತ್ರ ಯುಟಿ ಖಾದರ್ ಅವರು ಸ್ಪೀಕರ್ ಸ್ಥಾನಕ್ಕಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ಸಿಗ ಯು ಟಿ ಖಾದರ್ ಅವರ ಹೆಸರನ್ನು ಸಿಎಂ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅನುಮೋದಿಸಿದ ಅರ್ಜಿಯನ್ನು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಮಂಗಳವಾರ ಸಲ್ಲಿಸಿದರು.
ಅಂದಹಾಗೇ ವಿಧಾನಸಭೆಯ ಸ್ವೀಕರ್ ಆಗಿ ಆಯ್ಕೆಯಾಗುವಂತ ಅನೇಕ ಶಾಸಕರು ಈ ಹಿಂದಿನ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಕಳೆದ ಬಾರಿ ಸ್ಪೀಕರ್ ಆಗಿದ್ದಂತ ರಮೇಶ್ ಕುಮಾರ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಪೀಕರ್ ಆಗಿದ್ದಂತ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಈ ಹಿನ್ನಲೆಯಲ್ಲಿಯೇ ಸ್ಪೀಕರ್ ಆಗಿ ನೇಮಕಗೊಳ್ಳುವುದಕ್ಕೆ ಶಾಸಕರು ಹಿಂದೇಟು ಹಾಕುತ್ತಾರೆ ಎಂಬುದಾಗಿ ಹೇಳಲಾಗುತ್ತದೆ.
