ವಿಶ್ವಸಂಸ್ಥೆ- ಮಹಾಮಾರಿ ಕೋವಿಡ್-19 ಸೋಂಕನ್ನು ನಿಯಂತ್ರಿಸಲು ಅವಿರತ ಶ್ರಮಿಸಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯ ತಲುಪುವಂತೆ ಮಾಡಿದ ಭಾರತದ ಒಂದು ಮಿಲಿಯನ್ (10 ಲಕ್ಷ) ಆಶಾ ಕಾರ್ಯಕರ್ತೆಯರನ್ನು ವಿಶ್ವ ಆರೋಗ್ಯ ಸಂಸ್ಥೆ ಗೌರವಿಸಿದೆ.
ಭಾರತದಲ್ಲಿ ಕೊರೊನಾ ಸೋಂಕು ಸ್ಪೋಟಿಸಿದಾಗ ಸೋಂಕಿತ ವ್ಯಕ್ತಿಗಳನ್ನು ಪತ್ತೆಹಚ್ಚಲು ಮನೆ-ಮನೆಗೆ ಹೋಗಿ ತಪಾಸಣೆ ನಡೆಸುವ ಮೂಲಕ ಆಶಾ ಕಾರ್ಯಕರ್ತೆಯರು ಎಲ್ಲರ ಗಮನಸೆಳೆದು ಸೋಂಕು ನಿಯಂತ್ರಣದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ.ಗ್ರಾಮೀಣ ಭಾರತದಲ್ಲಿ ಮೊದಲ ಸಂಪರ್ಕ ಬಿಂದುವಾಗಿ ಕಾರ್ಯ ನಿರ್ವಹಿಸಿ, ಸೋಂಕು ನಿಯಂತ್ರಿಸಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಪ್ರಾದೇಶಿಕ ಆರೋಗ್ಯ ಸಮಸ್ಯೆಗಳ ಬದ್ಧತೆ, ನಾಯಕತ್ವ, ಜಾಗತಿಕ ಆರೋಗ್ಯವನ್ನು ಸುಧಾರಿಸಲು ಅತ್ಯುತ್ತಮ ಕೊಡುಗೆ ನೀಡಿದವರನ್ನು ಗುರುತಿಸಲು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಜಾಗತಿಕ ಆರೋಗ್ಯ ನಾಯಕರ ಪ್ರಶಸ್ತಿ ಘೋಷಿಸಿದ್ದಾರೆ.
ಜಾಗತಿಕ ಅಸಮಾನತೆ, ಸಂಘರ್ಷ, ಆಹಾರ ಅಭದ್ರತೆ, ಹವಾಮಾನ ಬಿಕ್ಕಟ್ಟು ಮತ್ತು ಸಾಂಕ್ರಾಮಿಕ ರೋಗಗಳ ಸಮಸ್ಯೆ ಎದುರಿಸುತ್ತಿರುವ ವೇಳೆ ಪ್ರಪಂಚದಾದ್ಯಂತ ಸಾರ್ವಜನಿಕರ ಆರೋಗ್ಯ ರಕ್ಷಿಸಲು ಮತ್ತು ಉತ್ತೇಜಿಸಲು ಅತ್ಯುತ್ತಮ ಕೊಡುಗೆ ನೀಡಿದವರನ್ನು ಈ ಪ್ರಶಸ್ತಿ ಮೂಲಕ ಗುರುತಿಸುವ ಕೆಲಸ ಮಾಡಲಾಗುತ್ತಿದೆ.
ಜಾಗತಿಕ ಆರೋಗ್ಯ ನಾಯಕರ ಪ್ರಶಸ್ತಿ ಪುರಸ್ಕೃತರು ತಮ್ಮ ಜೀವವನ್ನೇ ಪಣಕ್ಕಿಟ್ಟು, ಸಮಾನತೆ ಮತ್ತು ಮಾನವೀಯತೆಯಿಂದ ನಿಸ್ವಾರ್ಥ ಸೇವೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತದ ಆಶಾ ಕಾರ್ಯಕರ್ತೆಯರು ಮಾತ್ರವಲ್ಲದೇ ಇದೇ ವೇಳೆ ವರ್ಷದ ಫೆಬ್ರವರಿಯಲ್ಲಿ ದೇಶದ ತಖರ್ ಮತ್ತು ಕುಂದುಜ್ ಪ್ರಾಂತ್ಯಗಳಲ್ಲಿ ಶಸ್ತ್ರಸಜ್ಜಿತ ಬಂದೂಕುಧಾರಿಗಳಿಂದ ಕೊಲ್ಲಲ್ಪಟ್ಟ ಅಫ್ಘಾನಿಸ್ತಾನದ ಪೋಲಿಯೋ ಲಸಿಕೆ ಕಾರ್ಮಿಕರ ತಂಡ, ಹಾರ್ವರ್ಡ್ ಮೆಡಿಕಲ್ ಸ್ಕೂಲ್ನಲ್ಲಿ ಗ್ಲೋಬಲ್ ಹೆಲ್ತ್ ಅಂಡ್ ಸೋಶಿಯಲ್ ಮೆಡಿಸಿನ್ ವಿಭಾಗದ ಅಧ್ಯಕ್ಷರಾಗಿದ್ದ ಡಾ.ಪೌಲ್ ಫಾರ್ಮರ್, ಬ್ರಿಟಿಷ್ ಲೆಬನಾನಿನ ಮನೋವೈದ್ಯ ಡಾ.ಅಹ್ಮದ್ ಹಂಕಿರ್, ಕ್ಯಾಬೊ ವರ್ಡೆಯ ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿ ಲುಡ್ಮಿಲಾ ಸೋಫಿಯಾ ಒಲಿವೇರಾ ವರೆಲಾ, ಕುಷ್ಠರೋಗ ನಿರ್ಮೂಲನೆಗಾಗಿ ಶ್ರಮಿಸಿದ ಯೋಹೇ ಸಸಕಾವಾ ಅವರನ್ನು ಸಹ ಗೌರವಿಸಿದ್ದಾರೆ.

