ಮಂಗಳೂರು: ಮಂಗಳೂರಿನ ವೈದ್ಯರೊಬ್ಬರು ನಾನು ಮಾಸ್ಕ್ ಧರಿಸೋದೇ ಇಲ್ಲ. ಸರ್ಕಾರದ ದಡ್ಡ ನಿಯಮಗಳನ್ನು ಪಾಲಿಸುವುದಿಲ್ಲ ಅಂತಾ ಹೇಳಿ ಸೂಪರ್ ಮಾರುಕಟ್ಟೆಯಲ್ಲಿ ಅವಾಂತರ ಮಾಡಿರುವ ಘಟನೆ ಮಂಗಳವಾರ (ಮೇ 18)ದಂದು ನಡೆದಿದೆ.
ಮಂಗಳೂರಿನಲ್ಲಿರುವ ಜಿಮ್ಮೀಸ್ ಸೂಪರ್ ಮಾರ್ಕೆಟಿನಲ್ಲಿ ಮಂಗಳವಾರ ಮಂಗಳೂರಿನ ಪ್ರಸಿದ್ಧ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವಾಂತರ ಮೆರೆದಿದ್ದಾರೆ. ಸೂಪರ್ ಮಾರ್ಕೆಟ್’ಗೆ ಮಾಸ್ಕ್ ಧರಿಸದೆ ಬಂದ ಡಾ.ಕಕ್ಕಿಲ್ಲಾಯರನ್ನು ತಡೆದ ಸೂಪರ್ ಮಾರ್ಕೆಟ್ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ. ಇಷ್ಟಕ್ಕೇ ಸಿಬ್ಬಂದಿ ಜೊತೆ ಉಡಾಫೆ ವರ್ತನೆ ತೋರಿದ ಡಾಕ್ಟರ್, ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.
ನಾನು ಮಾಸ್ಕ್ ಧರಿಸೋದೇ ಇಲ್ಲ. ಮಾಸ್ಕ್ ಧರಿಸುವುದರಿಂದ ಕೊರೊನಾ ವೈರಸ್ ಬರೋದಿಲ್ಲ ಅನ್ನೋದು ತಪ್ಪು ಕಲ್ಪನೆ. ಸರ್ಕಾರದ ದಡ್ಡ ನಿರ್ಧಾರಗಳನ್ನು ನಾನು ಪಾಲಿಸೋದಿಲ್ಲ ಅಂತಾ ಹೇಳಿದ್ದಾರೆ.
ಆಗ ಸೂಪರ್ ಮಾರ್ಕೆಟ್ ಸಿಬ್ಬಂದಿ ಮಾಸ್ಕ್ ಧರಿಸದೆ ನಮ್ಮಲ್ಲಿ ಬರಬೇಡಿ, ಸಿಬ್ಬಂದಿ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತದೆ ಅಂತಾ ಮನವಿ ಮಾಡಿದರೂ, ಡಾ.ಕಕ್ಕಿಲ್ಲಾಯ ಮಾತ್ರ ಸೂಪರ್ ಮಾರ್ಕೆಟಿನಲ್ಲಿ ರೇಗಾಡಿ ಶಾಪಿಂಗ್ ಮಾಡಿ ಹೋಗಿದ್ದಾರೆ.
ಡಾ.ಶ್ರೀನಿವಾಸ ಕಕ್ಕಿಲ್ಲಾಯ ಕೊರೊನಾ ಸೋಂಕು ಆರಂಭದ ಕಾಲದಿಂದಲೂ, ಕೊರೊನಾ ವೈರಸ್ ಅನ್ನೋದು ಬೋಗಸ್, ಕೊರೊನಾದಿಂದ ಸಾವು ಬರಲ್ಲ, ಸರ್ಕಾರಗಳು ಕೊರೊನಾವನ್ನು ದಂಧೆಗೆ ಬಳಸಿಕೊಂಡಿದೆ ಎಂದು ಆರೋಪಿಸಿದ್ದರು.
ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಪಾಡೋದು, ಮಾಸ್ಕ್ ಧರಿಸೋದಕ್ಕೂ ಬಹಿರಂಗವಾಗಿಯೇ ಡಾ.ಶ್ರೀನಿವಾಸ್ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಈ ವೈದ್ಯ ಸಾರ್ವಜನಿಕವಾಗಿ ಮಾಸ್ಕ್ ಹಾಕದ ವೈದ್ಯನ ವರ್ತನೆ ಚರ್ಚೆಗೆ ಗ್ರಾಸ ವಾಗಿದೆ. ಸೂಪರ್ ಮಾರುಕಟ್ಟೆಗೆ ಬಂದ ಗ್ರಾಹಕರಿಗೆ ಡಾಕ್ಟರ್ ವರ್ತನೆಯಿಂದ ಆಶ್ಚರ್ಯವಾಗಿದ್ದು, ಜನರ ಆರೋಗ್ಯ ಕಾಪಾಡಬೇಕಾದ ವೈದ್ಯರೇ ಈ ರೀತಿ ವರ್ತಿಸುವುದೇ ಅಂತಾ ಮಾತಾಡಿಕೊಂಡಿದ್ದಾರೆ