ಹುಬ್ಬಳ್ಳಿ: ಆಸ್ಪತ್ರೆಯಲ್ಲಿ ಸತ್ತಿದ್ದ ಕಂದಮ್ಮ, ಸ್ಮಶಾನದಲ್ಲಿ ಜೀವಂತವಾಗಿರುವ ಅಚ್ಚರಿಯ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದೆ.
ಒಂದೂವರೆ ವರ್ಷದ ಮಗು ಆಕಾಶ ಬಸವರಾಜ ಪೂಜಾರ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿತ್ತು. ಈತನನ್ನ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ಆಕಾಶನ ಹೃದಯ ಬಡಿತ ನಿಲ್ಲಿಸಿದೆ. ಈ ಬಗ್ಗೆ ಕುಟುಂಬಕ್ಕೆ ಕಿಮ್ಸ್ ವೈದ್ಯರು ಮಾಹಿತಿ ನೀಡಿದ್ದರು.
ಮೃತಪಟ್ಟಿದ್ದಾನೆಂದು ಘೋಷಿಸಿದ್ದ ಆಕಾಶನನ್ನು ಊರಲ್ಲಿಯೇ ಅಂತ್ಯಕ್ರಿಯೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಪಾಲಕರು ಬಸಾಪುರ ಗ್ರಾಮಕ್ಕೆ ಆಕಾಶನ ಮೃತದೇಹ ತೆಗೆದುಕೊಂಡು ಬಂದಿದ್ದರು. ಅಲ್ಲದೇ ಸ್ಮಶಾನದಲ್ಲಿ ಅಂತ್ಯಕ್ರಿಯೆಯ ಅಂತಿಮ ವಿಧಿ ವಿಧಾನ ನಡೆದಿತ್ತು. ಇನ್ನೇನು ಮೃತ ಮಗುವಿನ ಬಾಯಲ್ಲಿ ಎರಡು ಹನಿ ನೀರು ಹಾಕುತ್ತಿದ್ದಂತೆ ಉಸಿರಾಡಿದ್ದಾನೆ. ಬಾಲಕ ಬದುಕುಳಿದಿದ್ದಾನೆ ಎಂದು ತಿಳಿದ ಅಲ್ಲಿ ಸೇರಿದ್ದ ಜನ, ಆಕಾಶನನ್ನು ಕೂಡಲೇ ನವಲಗುಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ, ವೆಂಟಿಲೇಟರ ಕೊರತೆಯಿಂದ ಸದ್ಯ ಕಂದಮ್ಮ ಆಕಾಶನನ್ನು ಮತ್ತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತಿದೆ. ಈ ಪ್ರಕರಣ ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ.