ಬೆಂಗಳೂರು : ಗಂಭೀರ ಅಪರಾಧ ದೂರುಗಳು ಬಂದಾಗ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲದಿರುವುದರ ಬಗ್ಗೆ ಹೈಕೋರ್ಟ್ ಪೊಲೀಸರ ಈ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಅಂತಹ ಗಂಭೀರ ಅಪರಾಧದ ದೂರುಗಳಿದ್ದಲ್ಲಿ ತಕ್ಷಣ FIR ದಾಖಲಿಸುವಂತೆ ನಿರ್ದೇಶಿಸಿದೆ.
ದೂರು ಸಲ್ಲಿಸಿದ್ದರೂ ಎಫ್ಐಆರ್ ದಾಖಲಿಸದ ಬಬಲೇಶ್ವರ ಪೊಲೀಸ್ ಠಾಣಾಧಿಕಾರಿ ಕ್ರಮ ಪ್ರಶ್ನಿಸಿ ವಿಜಯಪುರ ಜಿಲ್ಲೆಯ ಕಿಲಾರಹಟ್ಟಿಯ ವಿಠ್ಠಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಈ ಸೂಚನೆ ನೀಡಿದೆ.
ಲಲಿತಾಕುಮಾರಿ ವಿರುದ್ಧದ ಪ್ರಕರಣದಲ್ಲಿಸುಪ್ರೀಂಕೊರ್ಟ್ ನೀಡಿರುವ ತೀರ್ಪಿನ 120ನೇ ಪ್ಯಾರಾ ಸಂಬಂಧ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಸುತ್ತೋಲೆ ಹೊರಡಿಸಬೇಕು. ಗಂಭೀರ ಅಪರಾಧದ ದೂರು ಬಂದಾಗ ಪ್ರಾಥಮಿಕ ತನಿಖೆ ಅಗತ್ಯವಿಲ್ಲ. ಗಂಭೀರ ಅಪರಾಧ ಕಂಡು ಬಂದಾಗ ಎಫ್ಐಆರ್ ದಾಖಲಿಸಬೇಕು. ಈ ಸಂಬಂಧ ಪೊಲೀಸ್ ಠಾಣಾ ಡೈರಿಯಲ್ಲಿ ತನಿಖೆಯ ಸಂಪೂರ್ಣ ಮಾಹಿತಿ ಉಲ್ಲೇಖಿಸಬೇಕು’ ಎಂದು ನಿರ್ದೇಶನ ನೀಡಿದ ನ್ಯಾಯಪೀಠ, ಗಂಭೀರವಲ್ಲದ ಪ್ರಕರಣಗಳಲ್ಲಿ ಮಾತ್ರ ಪ್ರಾಥಮಿಕ ತನಿಖೆ ನಡೆಸಿ ಏಳು ದಿನಗಳೊಳಗೆ ಪ್ರಾಥಮಿಕ ತನಿಖೆ ಮುಕ್ತಾಯಗೊಳಿಸಬೇಕು ಎಂದು ಹೇಳಿದೆ.
‘ ಪ್ರಸ್ತುತದ ಪ್ರಕರಣದಲ್ಲಿ ಸಂಜ್ಞೆ ಅಪರಾಧ ವನ್ನು ಬಹಿರಂಗಪಡಿಸಿದಾಗ ಎಫ್ಐಆರ್ ದಾಖಲಿಸಬಹುದಾಗಿತ್ತು. ಆದರೆ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರುವವರೆಗೂ ದಾಖಲಿಸದಿರುವುದು ಕರ್ತವ್ಯ ಲೋಪವಾಗಿದೆ. ಇಂತಹ ಹಲವು ಪ್ರಕರಣಗಳು ಹೈಕೋರ್ಟ್ ಮೆಟ್ಟಿಲೇರುತ್ತಿದ್ದು, ತಕ್ಷಣ ಪ್ರಕರಣ ದಾಖಲಿಸಬೇಕು’ ಎಂದು ನಿರ್ದೇಶನ ನೀಡಿದೆ.