ಮುಂಬೈ: ದೈವಾರಾಧನೆ ಹಿಂದೂ ಸಂಪ್ರದಾಯವಲ್ಲ ಎಂದು ಹೇಳಿಕೆ ನೀಡುವ ಮೂಲಕ ನಟ ಚೇತನ್ ಲಕ್ಷಾಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಸಿನಿಮಾದಲ್ಲಿ ತೋರಿಸಲಾದ ದೈವಾರಾಧನೆಯ ಬಗ್ಗೆ ಚೇತನ್ ಕೇವಲವಾಗಿ ಮಾತನಾಡಿರುವುದನ್ನು ತುಳುನಾಡ ರಕ್ಷಣಾ ವೇದಿಕೆ ಮುಂಬೈ ಘಟಕ ತೀವ್ರವಾಗಿ ಖಂಡಿಸಿಸುತ್ತದೆ.
ದೈವಾರಾಧನೆ ತುಳುನಾಡಿನ ಆಚರಣೆಯ ಒಂದು ಭಾಗ, ದೈವಾರಾಧನೆ, ನಾಗಾರಾಧನೆಗೆ ತುಳುನಾಡಿನಲ್ಲಿ ವಿಶೇಷ ಮನ್ನಣೆ ಇದೆ. ದೈವಾರಾಧನೆಯನ್ನು ಬಹಳ ಭಕ್ತಿ, ಶ್ರದ್ದೆಯಿಂದ ಪೂಜಿಸುತ್ತಾರೆ. ದೈವಾರಾಧನೆ ಮೇಲೆ ನಮಗೆ ನಂಬಿಕೆ ಇದೆ. ಇದನ್ನು ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಬಹಳ ಚೆನ್ನಾಗಿ ತೋರಿಸಿದ್ದಾರೆ.
ಆದರೆ ಚೇತನ್ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಯದೆ ಮಾತನಾಡಿರುವುದು ತಪ್ಪು. ಚೇತನ್ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಮುಂಬೈಯ ಎಲ್ಲಾ ತುಳುವರನ್ನು ಒಟ್ಟುಗೂಡಿಸಿ ತುಳುನಾಡ ರಕ್ಷಣಾ ವೇದಿಕೆ ಮುಂಬೈ ಘಟಕದ ವತಿಯಿಂದ ಕಪ್ಪು ಬಾವುಟ ಹಿಡಿದು ಬೃಹತ್ ಪ್ರತಿಭಟನೆ ನಡೆಸುವುದಾಗಿ ತುಳುನಾಡ ರಕ್ಷಣಾ ವೇದಿಕೆ ಮುಂಬೈ ಘಟಕದ ಸಂಘಟನಾ ಕಾರ್ಯದರ್ಶಿ ಯಶು ಪಕ್ಕಳ ತಿಳಿಸಿದರು.