ನವದೆಹಲಿ : ದೇಶದ ಎಲ್ಲಾ ರಾಜ್ಯಗಳಲ್ಲೂ ಜುಲೈ 31ರ ವೇಳೆಗೆ ವಲಸೆ ಕಾರ್ಮಿಕರಿಗಾಗಿ ‘ಒಂದು ದೇಶ, ಒಂದು ಪಡಿತರ ಚೀಟಿ'( ಒನ್ ನೇಷನ್, ಒನ್ ರೇಷನ್ ಕಾರ್ಡ್) ಯೋಜನೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ತರ ಆದೇಶ ನೀಡಿದೆ. ವಲಸೆ ಕಾರ್ಮಿಕರ ನೊಂದಣಿಗೆ ಜುಲೈ 31ರ ಒಳಗೆ ಕೇಂದ್ರ ಸರ್ಕಾರ ಪೋರ್ಟಲ್ ಒಂದನ್ನು ಅಭಿವೃದ್ದಿಪಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ವಲಸೆ ಕಾರ್ಮಿಕರ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಇದಾಗಿದೆ. ಆದೇಶದನ್ವಯ, ಜುಲೈ 31ರೊಳಗೆ ಎಲ್ಲಾ ರಾಜ್ಯಗಳಲ್ಲಿ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಕಡ್ಡಾಯವಾಗಿ ಜಾರಿಯಾಗಬೇಕಿದೆ. ಆ ಮೂಲಕ ಪಡಿತರ ಚೀಟಿ ಇಲ್ಲದವರಿಗೆ ಆಹಾರ ಧಾನ್ಯ ವಿತರಿಸಲು ರಾಜ್ಯಗಳು ಯೋಜನೆ ರೂಪಿಸಬೇಕಿದೆ. ಅಸಂಘಟಿತ ಮತ್ತು ವಲಸೆ ಕಾರ್ಮಿಕರ ನೊಂದಣಿಗಾಗಿ ಕೇಂದ್ರ ಸರ್ಕಾರ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಬೇಕು. ಜುಲೈ 31ರೊಳಗೆ ಪ್ರಕ್ರಿಯೆ ಆರಂಭಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಜೊತೆಗೆ ದತ್ತಾಂಶಗಳನ್ನು ದಾಖಲು ಮಾಡುವುದರಲ್ಲಿನ ವಿಳಂಬದ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನೀರಸ ವರ್ತನೆ ಅಕ್ಷಮ್ಯ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
‘ಒಂದು ದೇಶ, ಒಂದು ಪಡಿತರ’ ಯೋಜನೆಯು ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಅರ್ಹರು ಅಥವಾ ಫಲಾನುಭವಿಗಳಿಗೆ ದೇಶದ ಯಾವುದೇ ಭಾಗದಲ್ಲಿಯಾದರೂ ಎನ್ಎಫ್ಎಸ್ಎ (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ) ಅಡಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಕಾಶ ನೀಡುತ್ತದೆ. ‘ಅಸಂಘಟಿತ ಕೆಲಸಗಾರರು ಮತ್ತು ವಲಸಿಗರ ಕುರಿತಾದ ಪೋರ್ಟಲ್ ಸ್ಥಾಪಿಸುವುದರಲ್ಲಿನ ಕೇಂದ್ರದ ವಿಳಂಬವು ಅದು ವಲಸೆ ಕಾರ್ಮಿಕರ ಕುರಿತಾದ ಕಾಳಜಿ ಹೊಂದಿಲ್ಲ ಹಾಗೂ ಅದನ್ನು ಬಲವಾಗಿ ನಿರಾಕರಿಸುತ್ತಿದೆ ಎಂಬುದನ್ನು ತೋರಿಸುತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡಿದೆ.
©2021 Tulunada Surya | Developed by CuriousLabs