ಬೆಂಗಳೂರು: ವೀಕೆಂಡ್ನಲ್ಲಿ ಕರಾವಳಿಯ ಗಂಡು ಕಲೆ ಕಂಬಳವನ್ನು ಕಣ್ತುಂಬಿಕೊಳ್ಳಲು ಕಾದಿದ್ದ ಸಿಲಿಕಾನ್ ಸಿಟಿ ಜನರಿಗೆ ಸಖತ್ ಮನರಂಜನೆ ಸಿಕ್ಕಿದೆ. ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೆಂಗಳೂರಲ್ಲಿ ನಡೆಯುತ್ತಿರುವ ಕಂಬಳದ ಮೊದಲ ದಿನದ ಝಲಕ್ ಅದ್ಭುತವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ತುಳುನಾಡಿನ ಕೋಣದ ಓಟದ ಸ್ಪರ್ಧೆಯನ್ನು ನೋಡಿ ಫುಲ್ ಫಿದಾ ಆಗಿದ್ದರು. ನಿನ್ನೆ ಆರಂಭವಾದ ನಮ್ಮ ಕಂಬಳ, ಬೆಂಗಳೂರು ಕಂಬಳದ ಸಂಭ್ರಮ ಇವತ್ತು ಕೂಡ ನಡೆಯಲಿದೆ.
ಇಂದು ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸೇರಿದಂತೆ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮತ್ತೆ ಸಭಾ ಕಾರ್ಯಕ್ರಮ ನಡೆಯಲಿದೆ ಈ ವೇಳೆ ನವದೆಹಲಿಯ NCCF ಅಧ್ಯಕ್ಷ ವಿಶಾಲ್ ಸಿಂಗ್ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದರ ಜೊತೆಗೆ ಇನ್ನೊಂದು ವಿಶೇಷ ಅಂದರೆ ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ ಕೂಡ ಮಧ್ಯಾಹ್ನ ಕಂಬಳ ಸಮಾರಂಭದಲ್ಲಿ ಭಾಗಿಯಾಗಿ ಕಣ್ಣು ತುಂಬಿಕೊಳ್ಳಲಿದ್ದಾರೆ.ಸಾಧಕ ಕುಸ್ತಿಪಟುಗಳಿಗೆ ಕಂಬಳ ಸಮಿತಿ ವತಿಯಿಂದ ಸಂಜೆ 4 ಗಂಟೆಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಅತ್ತ ವೇದಿಕೆ 2ರಲ್ಲಿ ನಿರಂತರವಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತಾವೆ. ಕರಂಗೋಲು ನೃತ್ಯ, ಗಂಡುಕಲೆ ಯಕ್ಷಗಾನ, ಆಟಿ ಕಳಂಜ, ಆಕ್ಸಿಜನ್ ಡ್ಯಾನ್ಸ್ ಟೀಮ್, ಮಂಗಳೂರು ಕಾಮಿಡಿ ಕಲಾವಿದರಿಂದ ಶೋ, ಮಿಮಿಕ್ರಿ ಸೇರಿ ಮುಂತಾದ ಕಾರ್ಯಕ್ರಮಗಳು ಈ ವೇಳೆ ನಡೆಯಲಿವೆ.ಅಲ್ಲದೇ ಸಂಜೆ 7 ಗಂಟೆಯಿಂದ ಸೆಲೆಬ್ರಿಟಿಗಳ ಸಂಗೀತ ಸಂಜೆ ಇರಲಿದೆ. ಇದರಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಸಂಗೀತ ರಸ ಸಂಜೆ ನಡೆಸಿಕೊಡಲಿದ್ದಾರೆ. ನಾಗರಾಜ್ ಅವರು ಮ್ಯೂಸಿಕಲ್ ಪ್ರೋಗ್ರಾಂ ಇರಲಿದೆ. ನಂತರ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಅವರಿಂದ ಸಂಗೀತ ಕಾರ್ಯಕ್ರಮ ಇರಲಿದೆ.