ನವದೆಹಲಿ: ದೆಹಲಿಯ ಪ್ರಜೆಗಳಿಂದ ಚುನಾಯಿತರಾದ ಸರಕಾರದ ಅಧಿಕಾರ ಮೊಟಕುಗೊಂಡಿದೆ. ಅದರ ಬದಲು ಲೆಫ್ಟಿನೆಂಟ್ ಗವರ್ನರಿಗೆ ಹೆಚ್ಚಿನ ಅಧಿಕಾರವನ್ನು ವಹಿಸಿ ಕೊಡಲಾಗಿದೆ. ಲೆಫ್ಟಿನೆಂಟ್ ಗವರ್ನರಿಗೆ ದೆಹಲಿ ಕೇಂದ್ರಾಡಳಿತ ಪ್ರದೇಶದ ಸರಕಾರ ಎಂಬ ಮುದ್ರೆಯೂ ದೊರೆತಿದೆ.
ಇನ್ನು ಮುಂದೆ ದೆಹಲಿಯ ಚುನಾಯಿತ ಸರಕಾರವು ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ ಕಡ್ಡಾಯವಾಗಿದೆ.
ದೆಹಲಿಗೆ ಸಂಬಂಧಿಸಿದ ದಿನನಿತ್ಯದ ಆಡಳಿತ ವಿಷಯಗಳಿರಲಿ, ಆಡಳಿತಾತ್ಮಕ ವಿಚಾರಗಳಿರಲಿ. ಅದರ ನಿರ್ಧಾರ, ಅನುಷ್ಠಾನಕ್ಕೆ ಮೊದಲು ಲೆಫ್ಟಿನೆಂಟ್ ಗವರ್ನರ್ ಅವರ ಅಭಿಪ್ರಾಯ ಕೇಳಿ, ಅದರಂತೆ ನಡೆಯಬೇಕಾಗುತ್ತದೆ. ಅಲ್ಲಿನ ಮುಖ್ಯಮಂತ್ರಿಗಿಂತ ಹೆಚ್ಚಿನ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್ ಹೊಂದಿರುತ್ತಾರೆ.
ರಾಷ್ಟ್ರೀಯ ರಾಜಧಾನಿ ದೆಹಲಿ (ತಿದ್ದುಪಡಿ) ಕಾಯ್ದೆ-2021′ ಅನ್ನು ನಿನ್ನೆಯಿಂದ (ಏ. 27 ) ಜಾರಿಗೆ ಬರುವಂತೆ ಕೇಂದ್ರ ಗೃಹ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಮಾರ್ಚ್ 22 ರಂದು ಲೋಕ ಸಭೆಯಲ್ಲೂ, ಅದೇ ತಿಂಗಳ 24 ರಂದು ರಾಜ್ಯಸಭೆಯಲ್ಲೂ ಈ ಕಾಯ್ದೆಯನ್ನು ಅಂಗೀಕರಿಸಲಾಗಿತ್ತು. ಮಾರ್ಚ್ 28 ರಂದು ರಾಷ್ಟ್ರಪತಿಯವರ ಸಮ್ಮತಿಯೂ ದೊರಕಿತ್ತು. ಕಾಯ್ದೆ ಜಾರಿಗೆ ಸುಪ್ರೀಮ್ ಕೋರ್ಟ್ ಕೂಡಾ ಈ ಮೊದಲು ನಿರ್ದೇಶನ ನೀಡಿತ್ತು.
ಅದರಂತೆ ಜನರಿಂದ ಆಯ್ಕೆಯಾದ ಹಾಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಲ್ಲಿದ್ದ ಅಧಿಕಾರವು ಭಾಗಶಃವಾಗಿ ಹಾಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಕೈಗೆ ಸೇರಿದೆ. ಅನಿಲ್ ಬೈಜಾಲ್ ಒಬ್ಬ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದಾರೆ. 2016 ರಲ್ಲಿ ನಜೀಬ್ ಜಂಗ್ ಅವರ ಅನಿರೀಕ್ಷಿತ ರಾಜಿನಾಮೆಯಿಂದ ತೆರವಾದ ಸ್ಥಾನದಲ್ಲಿ ಬೈಜಾಲ್ ಅಧಿಕಾರ ಸ್ವೀಕರಿಸಿದ್ದರು.
©2021 Tulunada Surya | Developed by CuriousLabs