ಅಗತ್ಯ ಕಂಡರೆ ಕ್ರಿಮಿನಲ್ ಮೊಕದ್ದಮೆ: ಪರಿಶಿಷ್ಟರ ಮಹಾಒಕ್ಕೂಟ ಎಚ್ಚರಿಕೆ
ಮಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳಲು ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ವ್ಯವಸ್ಥಿತ ಸಂಚು ನಡೆಸಿದೆ.
ಕರ್ನಾಟಕ ರಾಜ್ಯದಲ್ಲಿ 180 ಪರಿಶಿಷ್ಟ ಜಾತಿಗಳು ಮತ್ತು 105 ಪರಿಶಿಷ್ಟ ಬುಡಕಟ್ಟುಗಳು ಇವೆ ಎಂಬುದನ್ನು ಕಾಂತರಾಜ್ ಆಯೋಗ ನಡೆಸಿದ ಜಾತಿ ಸಮೀಕ್ಷೆಯಲ್ಲಿ ಪತ್ತೆಯಾಗಿದೆ ಎಂಬ ಪತ್ರಿಕಾ ವರದಿ (ಪ್ರಜಾವಾಣಿ, ಮಂಗಳೂರು ದಿ. 15.04.2025, ಮುಖಪುಟದ ಪ್ರಧಾನ ವರದಿ) ಈ ಷಡ್ಯಂತ್ರವನ್ನು ಬಯಲುಮಾಡಿದೆ.
ಹೆಚ್. ಕಾಂತರಾಜ್ ಅವರು ಅಧ್ಯಕ್ಷರಾಗಿದ್ದಾಗ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಮೀಕ್ಷೆಯ ದತ್ತಾಂಶಗಳನ್ನು ಅಧ್ಯಯನ ಮಾಡಿ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ರಾಜ್ಯ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಮಾಹಿತಿಯಿದೆ ಮತ್ತು ದತ್ತಾಂಶಗಳ ಅಧ್ಯಯನ ವರದಿಯು ಪ್ರಜಾವಾಣಿಗೆ ಲಭ್ಯವಾಗಿದೆ ಎಂದು ಪತ್ರಿಕಾ ವರದಿಯಲ್ಲಿ ಸ್ಪಷ್ಟ ಪಡಿಸಲಾಗಿದೆ.
ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಯಾವುದೇ ಜಾತಿಯನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸ ಬೇಕಾದರೆ, ಭಾರತದ ಸಂವಿಧಾನದ ವಿಧಿ (Article) 341ಮತ್ತು ಅದರ ಅನುಚ್ಚೇಧ (1) ರಡಿಯಲ್ಲಿ ಭಾರತದ ರಾಷ್ಟ್ರಪತಿಗಳು ಭಾರತದ ಗಜೆಟ್ ನಲ್ಲಿ ಅಧಿಸೂಚನೆ ಹೊರಡಿಸಬೇಕು. ಈ ಅಧಿಸೂಚನೆಗೆ ಮುನ್ನ ರಾಷ್ಟ್ರಪತಿಗಳು ಸಂಬಂಧಪಟ್ಟ ರಾಜ್ಯದ ರಾಜ್ಯಪಾಲರು ಅಥವಾ ಕೇಂದ್ರಾಡಳಿತ ಪ್ರದೇಶವಾದರೆ, ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಸಮಾಲೋಚನೆ ನಡೆಸಿ, ಯಾವುದೇ ಜಾತಿ, ಜನಾಂಗಗಳು ಅಥವಾ ಬುಡಕಟ್ಟುಗಳು ಅಥವಾ ಜಾತಿಗಳ ಒಳಗಿನ ಭಾಗ ಅಥವಾ ಗುಂಪುಗಳನ್ನು ಆಯಾ ರಾಜ್ಯಗಳಿಗೆ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸೀಮಿತಗೊಳಿಸಿ ಅಧಿಸೂಚನೆ ಹೊರಡಿಸಬೇಕು. ಹೀಗೆ ಪರಿಶಿಷ್ಟ ಜಾತಿಗಳು ಎಂದು ಅಧಿಸೂಚನೆಗೊಂಡ ಜಾತಿಗಳನ್ನು ಮಾತ್ರವೇ ಪರಿಶಿಷ್ಟ ಜಾತಿಗಳು ಎಂದು ಪರಿಗಣಿಸಲಾಗುತ್ತದೆ. ಬೇರೆ ಯಾವುದೂ ಪರಿಶಿಷ್ಟ ಜಾತಿಗಳು ಅಲ್ಲ.
ಹೀಗೆ ಅಧಿಸೂಚನೆಗೊಂಡ ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಯಾವುದೇ ಜಾತಿ ಅಥವಾ ಬುಡಕಟ್ಟು ಅಥವಾ ಯಾವುದೇ ಜಾತಿ, ಬುಡಕಟ್ಟುಗಳ ಭಾಗ ಅಥವಾ ಗುಂಪನ್ನು ಕಾನೂನಿನಂತೆ ಪಟ್ಟಿಯಿಂದ ಕಿತ್ತುಹಾಕುವ ಅಥವಾ ಅದಕ್ಕೆ ಸೇರ್ಪಡೆ ಗೊಳಿಸುವ ಅಧಿಕಾರ ಸಂವಿಧಾನದ ವಿಧಿ 341 ರ ಅನುಚ್ಚೇಧ (2) ರಲ್ಲಿ ಸಂಸತ್ತಿಗೆ ಮಾತ್ರವೇ ನೀಡಲಾಗಿದೆ. ಆದರೆ, ವಿಧಿ 341(1) ರಲ್ಲಿ ಹೊರಡಿಸಲಾದ ಅಧಿಸೂಚನೆಯನ್ನು ಸಂಸತ್ ಕೂಡಾ ವಿರೂಪ ಗೊಳಿಸದಂತೆ ನಿರ್ಬಂಧ ವಿಧಿಸಲಾಗಿದೆ.
ಪ್ರಸಕ್ತ ಕರ್ನಾಟಕ ರಾಜ್ಯದಲ್ಲಿ 101 ಜಾತಿಗಳು ಎಂದು ಪರಿಶಿಷ್ಟ ಜಾತಿಗಳು ಎಂದು ಅಧಿಸೂಚಿಸಲ್ಪಟ್ಟಿವೆ. ಆದ್ದರಿಂದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇಲ್ಲದ ಯಾವುದೇ ಜಾತಿಯೂ ಪರಿಶಿಷ್ಟ ಜಾತಿ ಅಲ್ಲ. ಅದನ್ನು ಪರಿಶಿಷ್ಟ ಜಾತಿ ಎಂದು ಗುರುತಿಸುವುದನ್ನು, ಪರಿಗಣಿಸುವುದನ್ನು ಭಾರತದ ಸುಪ್ರೀಂ ಕೋರ್ಟ್, ಸಂವಿಧಾನದ ಮೇಲೆ ಎಸಗುವ ದಾಳಿ, ಅಸಂವಿಧಾನಿಕ, ಎಂದೇ ಪರಿಗಣಿಸಿದೆ.
ರಾಜ್ಯದಲ್ಲಿ ಹಿಂದುಳಿದ ಅಥವಾ ಅತೀ ಹಿಂದುಳಿದ ಕೆಲವು ಜಾತಿಗಳು ಅಕ್ರಮ ದಾರಿ ಮೂಲಕ ಪರಿಶಿಷ್ಟ ಜಾತಿಗಳು ಅಥವಾ ಪರಿಶಿಷ್ಟ ಬುಡಕಟ್ಟುಗಳು ಎಂಬ ಜಾತಿ ಸರ್ಟಿಫಿಕೇಟ್ ಪಡೆಯುವುದು ಸಾಧ್ಯ ಮಾಡುವುದು ಆಯೋಗದ ಸಂವಿಧಾನ ವಿರೋಧಿ, ದಲಿತ ವಿರೋಧಿ ಷಡ್ಯಂತ್ರ ಎಂಬುದು ಬಯಲಾಗಿದೆ.
ಪರಿಶಿಷ್ಟ ಬುಡಕಟ್ಟುಗಳಿಗೆ ಸಂಬಂಧ ಪಟ್ಟಂತೆ ಸಂವಿಧಾನದ ವಿಧಿ 342(1) ಮತ್ತು 342(2) ರಲ್ಲಿ ಇದೇ ರೀತಿಯ ನಿಯಮವನ್ನು ಪ್ರಸ್ತಾಪಿಸಲಾಗಿದೆ. ಪ್ರಸಕ್ತ ರಾಜ್ಯದಲ್ಲಿ ಪರಿಶಿಷ್ಟ ಬುಡಕಟ್ಟುಗಳ ಪಟ್ಟಿಯಲ್ಲಿ 49 ಜಾತಿಗಳು/ ಬುಡಕಟ್ಟುಗಳು ಅಧಿಸೂಚಿತಗೊಂಡಿವೆ. ಕಾಂತರಾಜ್ ಆಯೋಗವು ರಾಜ್ಯದಲ್ಲಿ 105 ಪರಿಶಿಷ್ಟ ಬುಡಕಟ್ಟುಗಳನ್ನು ಪತ್ತೆ ಮಾಡಿದೆ ಎಂಬುದು ರಾಜ್ಯದ ಪರಿಶಿಷ್ಟ ಬುಡಕಟ್ಟುಗಳ ಮೇಲೆ ದೂರಗಾಮಿ ಪ್ರತಿಕೂಲ ಪರಿಣಾಮ ಬೀರುವ, ಅವರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ವ್ಯವಸ್ಥಿತ ಷಡ್ಯಂತ್ರದ ಮೊದಲ ಹೆಜ್ಜೆ. ಇದು ಸಂವಿಧಾನ ವಿರೋಧಿ. ಅಗತ್ಯ ಬಿದ್ದರೆ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ ಪರಿಶೀಲಿಸಲಾಗುವುದು.
ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಕಾಂತರಾಜ್ ವರದಿಯನ್ನು ಒಪ್ಪಿದೆ ಎಂದು ಪ್ರಕಟಿಸಿರುವುದರಿಂದ, ಸಂವಿಧಾನದ ಮೇಲೆ ಮತ್ತು ಪರಿಶಿಷ್ಟ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳ ಮೇಲೆ ಕಾಂಗ್ರೆಸ್ ಸರಕಾರವೇ ನಡೆಸಿದ ನಿರ್ಲಜ್ಜ ದಾಳಿ ಇದು ಎಂದು ಪರಿಗಣಿಸ ಬೇಕಾಗಿದೆ.
ಒಳ ಮೀಸಲಾತಿ: ಎ. 20ಕ್ಕೆ ನಗರದಲ್ಲಿ ಸಮಾಲೋಚನೆ
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸ ಬೇಕೆಂಬ ಬೇಡಿಕೆ ಮತ್ತು ಅದರ ಸಾಧಕ – ಬಾಧಕಗಳ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲು ಸಮಾಲೋಚನಾ ಸಭೆಯೊಂದನ್ನು ವ್ಯವಸ್ಥೆ ಮಾಡಲಾಗಿದೆ.
ಮಂಗಳೂರು ನಗರದ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ಹೊಟೇಲ್ ಶ್ರೀನಿವಾಸ್ ನಲ್ಲಿ ದಿನಾಂಕ. 20.04.2025 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಸಮಾಲೋಚನಾ ಸಭೆ ಆರಂಭ ವಾಗಲಿದೆ.
ವಿವಿಧ ಸಮುದಾಯಗಳ ಮುಖಂಡರುಗಳು, ಸಾಮಾಜಿಕ ಕಾರ್ಯಕರ್ತರು, ಚಿಂತಕರು, ಸಾರ್ವಜನಿಕ ನೀತಿ ನಿರೂಪಕರು ಭಾಗವಹಿಸಲಿರುವ ಈ ಸಮಾಲೋಚನೆಯಲ್ಲಿ, ಜಾತಿ ಮತ್ತು ಮೀಸಲಾತಿ ನೀತಿ ಬಗ್ಗೆ ಮಹತ್ವ ಪೂರ್ಣ ರೀತಿಯಲ್ಲಿ ಮಾಹಿತಿ ವಿನಿಮಯವಾಗಲಿದೆ. ಆಸಕ್ತರು, ಮಹಾಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್ ಅವರ ಮೊಬೈಲ್ ನಂಬರ್ 94490 83300 ಕ್ಕೆ ಕರೆ ಮಾಡಿ ಹೆಸರು ನೋಂದಾಯಿಸ ಬೇಕು ಎಂದು ಲೋಲಾಕ್ಷ ರವರು ತಿಳಿಸಿದರು