ಮಂಗಳೂರು, ಜೂನ್ 16: ಜನತಾದಳ (ಜಾತ್ಯಾತೀತ) ಪಕ್ಷದ ಪುತ್ತೂರು ತಾಲೂಕು ಘಟಕವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಪಕ್ಷದ ಕೆ. ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ರವರಿಗೆ ಮಹತ್ವದ ಸಂಘಟನಾ ಜವಾಬ್ದಾರಿಯನ್ನು ವಹಿಸಿ ತಾಲೂಕು ಅದ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ ತಿಳಿಸಿದ್ದಾರೆ.

ಪಕ್ಷದ ರಾಜ್ಯ ನಾಯಕತ್ವ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದ ಮೇರೆಗೆ ಈ ನೇಮಕಾತಿ ಮಾಡಲಾಗಿದ್ದು, ಪುತ್ತೂರು ತಾಲೂಕಿನಾದ್ಯಂತ ಪಕ್ಷದ ಸಂಘಟನೆ ವಿಸ್ತರಣೆ ಹಾಗೂ ಬಲವರ್ಧನೆ ಕಾರ್ಯಗಳನ್ನು ಪ್ರಭಾಕರ ಸಾಲ್ಯಾನ್ ಅವರು ಮುನ್ನಡೆಸಲಿದ್ದಾರೆ.
ಪುತ್ತೂರು ತಾಲೂಕಿನಲ್ಲಿ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ತಾಲೂಕು ಘಟಕದ ಪುನರ್ರಚನೆ, ಗ್ರಾಮ ಸಮಿತಿಗಳ ರಚನೆ, ಬೂತ್ ಮಟ್ಟದ ಸಮಿತಿಗಳ ಸಂಘಟನೆ ಹಾಗೂ ಕಾರ್ಯಕರ್ತರ ಸಕ್ರಿಯ ಭಾಗವಹಿಸುವಿಕೆಗೆ ವಿಶೇಷ ಒತ್ತು ನೀಡಲಾಗುವುದು. ಅಲ್ಲದೆ, ಯುವಜನತೆ, ಮಹಿಳೆಯರು ಹಾಗೂ ವಿವಿಧ ವರ್ಗಗಳ ಜನರನ್ನು ಪಕ್ಷದೊಂದಿಗೆ ಇನ್ನಷ್ಟು ಸಂಪರ್ಕಿಸುವ ಉದ್ದೇಶದಿಂದ ಹಲವು ಜನಪರ ಹಾಗೂ ಸಂಘಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಕೆ. ಪ್ರಭಾಕರ ಸಾಲ್ಯಾನ್ ಅವರು ಹಲವು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಜನಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅವರ ಅನುಭವ, ನಾಯಕತ್ವ ಹಾಗೂ ಸಂಘಟನಾ ಕೌಶಲ್ಯದಿಂದ ಪುತ್ತೂರು ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಹೊಸ ಬಲ ದೊರೆಯಲಿದೆ ಎಂಬ ವಿಶ್ವಾಸವನ್ನು ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ ವ್ಯಕ್ತಪಡಿಸಿದ್ದಾರೆ.
ಈ ನೇಮಕಾತಿಯಿಂದ ಪುತ್ತೂರು ತಾಲೂಕಿನಲ್ಲಿ ಪಕ್ಷದ ಸಂಘಟನೆ ಇನ್ನಷ್ಟು ಸಕ್ರಿಯಗೊಂಡು, ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಲಿದೆ ಎಂದು ಪಕ್ಷದ ಮುಖಂಡರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.




