ಮಂಗಳೂರು : ಮಂಗಳೂರಿನ ಬಿಜೈ ಬಳಿ ಭೀಕರ ಅಪಘಾತದ ಮೂಲಕ ಕೊಲೆ ಯತ್ನ ನಡೆದಿದೆ. ಸತೀಶ್ ಕುಮಾರ್.ಕೆ.ಎಂ ಎಂಬವರು ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿಯಾಗಿದ್ದು, ಮುರಳಿ ಪ್ರಸಾದರವರು ಇವರ ಎದುರು ಮನೆಯ ನಿವಾಸಿಯಾಗಿರುತ್ತಾರೆ. ಸತೀಶ್ ಕುಮಾರ್.ಕೆ.ಎಂ ರವರಿಗೆ ಮುರಳಿ ಪ್ರಸಾದ್ ಹಾಗೂ ಅವರ ಮನೆಯವರೊಂದಿಗೆ ಮೊದಲಿನಿಂದಲು ಸದಾಕಾಲ ತಂಟೆ ತಕರಾರು ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ಈ ಹಿಂದೆ ಮುರಳಿ ಪ್ರಸಾದ ತಂದೆಯವರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿತ ಸತೀಶ್ ಕುಮಾರ್.ಕೆ.ಎಂ ಎಂಬಾತನು ಕಾರಣ ವಿಲ್ಲದೆ ಬೈಕ್ನಲ್ಲಿ ಬಂದು ತಾಗಿಸಿಕೊಂಡು ಹೋಗಿ ಅವಾಚ್ಯ ಶಬ್ದದಿಂದ ನಿಂದಿಸಿದ್ದು, ಈ ಬಗ್ಗೆ ಉರ್ವಾ ಠಾಣೆಯಲ್ಲಿ 2023 ರಲ್ಲಿ ದೂರು ದಾಖಲಾಗಿರುತ್ತದೆ.
ಇಂದು ಬಿಜೈ ಕಾಪಿಕಾಡ್ನ 6 ನೇ ಮುಖ್ಯ ರಸ್ತೆಯಲ್ಲಿ ಮುರಳಿ ಪ್ರಸಾದ ರವರು ತನ್ನ ಮೋಟಾರ್ ಸೈಕಲ್ ನಲ್ಲಿ ಮನೆಯಿಂದ ಹೋಗುತ್ತಿರುವಾಗ ಆರೋಪಿತ ಸತೀಶ್ ಕುಮಾರ್.ಕೆ.ಎಂ ಅವರ ಕಾರಿನಲ್ಲಿ ಕಾದು ಕುಳಿತು ಉದ್ದೇಶ ಪೂರ್ವಕವಾಗಿ ಮುರಳಿ ಪ್ರಸಾದರವರನ್ನು ಕೊಲೆಮಾಡುವ ಉದ್ದೇಶದಿಂದ ಕಾರನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದು ಮುಂದಕ್ಕೆ ಚಲಿಸಿ ನಡೆದುಕೊಂಡು ಹೋಗುತ್ತಿದ್ದ ಹೆಂಗಸಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಪಕ್ಕದ ಕಾಂಪೌಂಡ್ ಗೋಡೆಯಲ್ಲಿ ನೇತಾಡಿಕೊಂಡ ಸ್ಥಿತಿಯಲ್ಲಿ ಇದ್ದ ಪಾದಚಾರಿ ಮಹಿಳೆಯನ್ನು ಸಾರ್ವಜನಿಕರು ಕಾಂಪೌಂಡ್ ಗೋಡೆಯಿಂದ ಕೆಳಗೆ ಇಳಿಸಿದರು. ಮುರಳಿ ಪ್ರಸಾದ ರವರಿಗೆ ಗಾಯಗಳು ಉಂಟಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿತ ಸತೀಶ್ ಕುಮಾರ್.ಕೆ.ಎಂ ರವರನ್ನು ವಶಕ್ಕೆ ಪಡೆದುಕೊಂಡು ಕಾರನ್ನು ಸ್ವಾಧೀನಪಡಿಸಲಾಗಿದೆ.ಆರೋಪಿತ ಸತೀಶ್ ಕುಮಾರ್.ಕೆ.ಎಂ ಎಂಬವರು ಉದ್ದೇಶ ಪೂರ್ವಕವಾಗಿ ಪೂರ್ವ ದ್ವೇಷದಿಂದ ಕೊಲೆಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿದ್ದ ಆರೋಪದಲ್ಲಿ ಈ ಬಗ್ಗೆ ನಗರದ ಉರ್ವಾ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು ಹಾಗೂ ಕಾರನ್ನು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿ ಹೆಂಗಸಿಗೆ ಡಿಕ್ಕಿಯಾದ ಕುರಿತು ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ಆರೋಪಿಯ ವಿರುದ್ದ ದಾಖಲಾಗಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ. ಹೆಚ್ಚಿನ ವಿವರಗಳು ಮುಂದಿನ ತನಿಖೆಯಲ್ಲಿ ತಿಳಿದು ಬರಲಿದೆ.
