ಮಂಗಳೂರು :- ಬೆಳ್ತಂಗಡಿ ತಾಲ್ಲೂಕು ಮಲವಂತಿಗೆ ಗ್ರಾಮದ ವ್ಯಾಪ್ತಿಗೊಳಪಟ್ಟ ಎಳನೀರು, ಗುತ್ಯಡ್ಕ, ಬಂಗಾರಗಿ, ಉಕ್ಕುಡ ಮತ್ತು ಕುರ್ಚಾರು ಪ್ರದೇಶಗಳು ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ನೂರಾರು ಕುಟುಂಬಗಳು ತಮ್ಮ ಗ್ರಾಮ ಪಂಚಾಯತ್ ಗೆ ಭೇಟಿ ನೀಡಬೇಕಾದರೆ ಕುದುರೆಮುಖ-ಬಜಗೋಳಿ-ಬೆಳ್ತಂಗಡಿ ಮೂಲಕ ಸುಮಾರು 120 ಕಿ.ಮೀ ದೂರವನ್ನು ಕ್ರಮಿಸಬೇಕು. ಆದರೆ, ಎಳನೀರು-ದಿಡುಪೆ ರಸ್ತೆಯ ಅಭಿವೃದ್ಧಿಯಾದರೆ ಈ ಪ್ರದೇಶಗಳಲ್ಲಿನ ಜನರಿಗೆ ತಮ್ಮ ಗ್ರಾಮಪಂಚಾಯತ್ ಗೆ ಕೇವಲ 9 ಕಿ.ಮೀ ಹಾಗೂ ತಾಲ್ಲೂಕು ಕೇಂದ್ರಕ್ಕೆ 20 ಕಿ.ಮೀ ದೂರವನ್ನು ಕ್ರಮಿಸಿದರೆ ತಲುಪಬಹುದಾಗಿದೆ.
ಈ 9 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲು ಈ ಭಾಗದ ಜನರು ಹಲವಾರು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ, ಈ ರಸ್ತೆಯ ಅಭಿವೃದ್ಧಿ ಮಾಡಬೇಕಾದರೆ ಅರಣ್ಯ ಇಲಾಖೆಯ ವನ್ಯ-ಜೀವಿ ವಿಭಾಗದ ಅನುಮತಿ ಅಗತ್ಯವಾಗಿರುತ್ತದೆ. ಅದರಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಈ ರಸ್ತೆಯ ಅಭಿವೃದ್ಧಿಗೆ ಸರ್ವೆ ನಡೆಸುವ ಬಗ್ಗೆ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗವು ಅನುಮತಿ ನೀಡಿರುತ್ತದೆ ಎಂಬುದಾಗಿ ಪತ್ರಿಕಾ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ. ಆದರೆ, ಇದುವರೆವಿಗೂ ರಸ್ತೆ ಅಭಿವೃದ್ಧಿಯ ಸರ್ವೇ ಕಾರ್ಯವು ಪ್ರಗತಿಯನ್ನು ಕಂಡುಬಂದಿರುವುದಿಲ್ಲ. ಮಳೆಗಾಲದಲ್ಲಿ ಚಾರ್ಮಾಡಿ ಮತ್ತು ಶಿರಾಡಿ ಎರಡೂ ಘಾಟ್ ರಸ್ತೆಗಳಲ್ಲಿ ಗುಡ್ಡ ಕುಸಿತದಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಈ ಸಂದರ್ಭಗಳಲ್ಲಿ ಕರಾವಳಿ ಮತ್ತು ಬೆಟ್ಟದ ಮೇಲಿನ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳು ಕಡಿತಗೊಂಡು ಕರಾವಳಿಯು ದ್ವೀಪವಾಗಿ ಪರಿವರ್ತೆನೆಗೊಳ್ಳುತ್ತದೆ. ಮುಂದುವರೆದು ಎಳನೀರು-ದಿಡುಪೆ ರಸ್ತೆಯನ್ನು ಸಂಸೆಯವರೆಗೆ ಅಭಿವೃದ್ಧಿಪಡಿಸಿದ್ದಲ್ಲಿ ಕರಾವಳಿ ಹಾಗೂ ಘಟ್ಟದ ಮೇಲಿನ ಪ್ರದೇಶಗಳನ್ನು ಸಂಪರ್ಕಿಸಲು ಇನ್ನೊಂದು ಪರ್ಯಾಯ ರಸ್ತೆಯನ್ನು ಅಭಿವೃದ್ಧಿಪಡಿಸಿದಂತಾಗುತ್ತದೆ.
ಆದ್ದರಿಂದ ಈ ಎಲ್ಲಾ ಅಂಶಗಳನ್ನು ಗಮನಿಸಿ ಬೆಳ್ತಂಗಡಿ-ದಿಡುಪೆ-ಎಳನೀರು-ಸಂಸೆ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಅಗತ್ಯವಿರುವ ಸರ್ವೇ ಕಾರ್ಯ ಮತ್ತು ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಸಚಿವರು ಮುಖ್ಯಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮನವಿ ಸಲ್ಲಿಸಿದ್ದಾರೆ
