ಮಂಗಳೂರು, ಜೂನ್ 23: ದಕ್ಷಿಣ ಕನ್ನಡ ಜಿಲ್ಲೆಯ ಖಾಝಿಯಾಗಿ ಸೇವೆ ಸಲ್ಲಿಸಿದ್ದ ಗೌರವಾನ್ವಿತ ಧಾರ್ಮಿಕ ನಾಯಕ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿಧನಕ್ಕೆ ಆರೋಗ್ಯ ಸಚಿವರಾದ ಯುಟಿ ಕಾದರ್, ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಮುಖಂಡರು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದಾರೆ.
ಸಂತಾಪ ಸಂದೇಶದಲ್ಲಿ ಸಚಿವ ಯು.ಟಿ. ಖಾದರ್ ಅವರು, ಮುಸ್ಲಿಯಾರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ದೀರ್ಘಕಾಲ ಧಾರ್ಮಿಕ ಮಾರ್ಗದರ್ಶನ ನೀಡಿದ ಅಪರೂಪದ ಧಾರ್ಮಿಕ ನಾಯಕರಾಗಿದ್ದರು. ತಮ್ಮ ಜೀವನವನ್ನೆಲ್ಲ ಧರ್ಮ, ಶಿಕ್ಷಣ ಹಾಗೂ ಸಮಾಜ ಸೇವೆಗೆ ಸಮರ್ಪಿಸಿ ಸಾವಿರಾರು ಜನರಿಗೆ ದಾರಿದೀಪರಾಗಿದ್ದರು ಎಂದು ಸ್ಮರಿಸಿದ್ದಾರೆ.
ಜೆಡಿಎಸ್ ಮುಖಂಡರಿಂದ ಸಂತಾಪ :
ಜೆಡಿಎಸ್ ಮುಖಂಡರು ಸಂತಾಪ ಸೂಚಿಸಿ ಅವರ ಸರಳತೆ, ಆಳವಾದ ಧಾರ್ಮಿಕ ಜ್ಞಾನ, ಮಾನವೀಯತೆ ಹಾಗೂ ಸಮನ್ವಯದ ಮನೋಭಾವ ಎಲ್ಲರಿಗೂ ಪ್ರೇರಣೆಯಾಗಿತ್ತು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಅವರ ಅಗಲಿಕೆ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಸಮಸ್ತ ಸಮಾಜಕ್ಕೂ ಅಪಾರ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲಾಹ್ ಅವರು ಮೃತರಿಗೆ ಜನ್ನತುಲ್ ಫಿರ್ದೌಸ್ನಲ್ಲಿ ಉನ್ನತ ಸ್ಥಾನವನ್ನು ಕರುಣಿಸಲಿ ಹಾಗೂ ಕುಟುಂಬ ಸದಸ್ಯರು, ಶಿಷ್ಯರು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಕುಂಞ , ರಾಜ್ಯ ಮುಖಂಡರಾದ ಹೈದರ್ ಪರ್ತೀಪಾಡಿ, ಜಿಲ್ಲಾ ಕಾರ್ಯದ್ಯಕ್ಷ ಇಕ್ಬಲ್ ಮುಲ್ಕಿ , ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಅಧ್ಯಕ್ಷೆ ಹಾಗೂ ಮಾಜಿ ಕಾರ್ಪೊರೇಟರ್ ರಮೀಜಾ ನಾಸೀರ್ , ಜೆಡಿಎಸ್ ಜಿಲ್ಲಾ ಮುಖಂಡ ಅಸ್ರಫ್ ಕಲ್ಲೇಗ , ನಜೀರ್ ಸಾಮಾಣಿಗೆ, ಅವರು ಸಹ ಸಂತಾಪ ಸೂಚಿಸಿದ್ದು, ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಸಮಾಜಮುಖಿ ಸೇವೆ, ಧಾರ್ಮಿಕ ನಾಯಕತ್ವ ಹಾಗೂ ಜನಸೇವೆಯ ಕೊಡುಗೆಗಳು ಸದಾ ಸ್ಮರಣೀಯವಾಗಿರಲಿವೆ ಎಂದು ಹೇಳಿದ್ದಾರೆ.
ತುಳುನಾಡ ರಕ್ಷಣಾ ವೇದಿಕೆ ಸಂತಾಪ :
ತುಳುನಾಡ ರಕ್ಷಣಾ ವೇದಿಕೆ ಉಪಾದ್ಯಕ್ಷ ಜಪ್ಪು ಇಬ್ರಾಹಿಂ ರವರು ಖಾಜಿ ರವರ ಅಗಲಿಕೆ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಸಮಸ್ತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಲಿವೆ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ನಾಳೆ ಮೂಡುಬಿದಿರೆ ಸಮೀಪ ದಫನ ಕ್ರಿಯೆ
(ಜೂನ್ 23) ನಿಧನರಾದ ಮಂಗಳೂರು ಖಾಝಿ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಪಾರ್ಥಿವ ಶರೀರವನ್ನು ಮಂಗಳೂರಿನ Zeenath Baksh Juma Masjid ನಿಂದ ಸಂಜೆ 4.30ಕ್ಕೆ ಕಾಸರಗೋಡಿನ ಮೇಲ್ಪರಂಬದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು.
ಅಲ್ಲಿ ಕುಟುಂಬ ಸದಸ್ಯರು, ಶಿಷ್ಯರು ಹಾಗೂ ಭಕ್ತರ ಅಂತಿಮ ದರ್ಶನದ ಬಳಿಕ ಮಧ್ಯರಾತ್ರಿ ಪಾರ್ಥಿವ ಶರೀರವನ್ನು ಮೂಡುಬಿದಿರೆ ಸಮೀಪದ ಕಾಶಿಪಟ್ಣಕ್ಕೆ ತರಲಾಗುವುದು. ಬುಧವಾರ ಬೆಳಗ್ಗೆ 8 ಗಂಟೆಯ ಬಳಿಕ ದಫನ ಕ್ರಿಯೆ ನೆರವೇರಲಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯದ ಪ್ರಮುಖ ಧಾರ್ಮಿಕ ಮಾರ್ಗದರ್ಶಕರಾಗಿದ್ದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿಧನಕ್ಕೆ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.


