ಮಂಗಳೂರು:
ಬ್ಯಾರಿ ಭಾಷೆ–ಸಾಹಿತ್ಯದ ಸಂರಕ್ಷಣೆ ಹಾಗೂ ವಿಕಸನಕ್ಕೆ ವೇದಿಕೆಯಾಗುವ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಜನವರಿ 4ರಂದು ಮಂಗಳೂರು ತಾಲೂಕಿನ ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ದಿನವಿಡೀ ಸಾಹಿತ್ಯ, ಸಂಸ್ಕೃತಿ ಮತ್ತು ಕಲಾ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ನಡೆಯಲಿದೆ.
ಸಮ್ಮೇಳನದ ಅಂಗವಾಗಿ ಬೆಳಿಗ್ಗೆ 9.30ಕ್ಕೆ ಗುರುಪುರ ಕೈಕಂಬದ ಸಬೀಲುಲ್ ಹುದಾ ಅಲ್ಬಿರ್ರ್ ಶಾಲಾ ವಠಾರದಿಂದ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯನ್ನು ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಹಾಜಿ ಎಂ.ಹೆಚ್. ಮೊಹಿದಿನ್ ಅಡ್ಡೂರು ಉದ್ಘಾಟಿಸಲಿದ್ದು, ಬೆಳಿಗ್ಗೆ 10.00ಕ್ಕೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್. ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಳಿಗ್ಗೆ 10.15ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಸಮ್ಮೇಳನಾಧ್ಯಕ್ಷರಾಗಿ ಭಾಷಣ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್. ವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲೇ ಬ್ಯಾರಿ ಸಾಹಿತ್ಯಕ್ಕೆ ಹೊಸ ಸೇರ್ಪಡೆಗಳಾಗಿ ಐದು ಕೃತಿಗಳು ಬಿಡುಗಡೆಗೊಳ್ಳಲಿವೆ. ಶಮೀಮಾ ಕುತ್ತಾರ್ ಅವರ ‘ಪಡಿಞ್ಞಾರ್ರೊ ಪೂ’ (ಕಥಾಸಂಕಲನ), ಹಸೀನ ಮಲ್ನಾಡ್ ಅವರ ‘ಮಿನ್ನಾಂಪುಲು’ (ಹನಿಗವನ ಸಂಕಲನ), ಎನ್.ಎಂ. ಹನೀಫ್ ನಂದರಬೆಟ್ಟು ಅವರ ‘ಸಂಪುಕಾತ್’, ಬಶೀರ್ ಅಹ್ಮದ್ ಬೆಳ್ಳಾಯಿರು ಅವರ ‘ಬೆಲ್ಚ’ ಹಾಗೂ ಹೈದರಲಿ ಕಾಟಿಪಳ್ಳ ಅವರ ‘ನಸೀಅತ್’ ಕವನ ಸಂಕಲನಗಳು ಲೋಕಾರ್ಪಣೆಗೊಳ್ಳಲಿವೆ.
ಮಧ್ಯಾಹ್ನ 12.00ಕ್ಕೆ ಸಮ್ಮೇಳನಾಧ್ಯಕ್ಷರ ಭಾಷಣದ ಕುರಿತು ಚರ್ಚಾಗೋಷ್ಠಿ ನಡೆಯಲಿದ್ದು, ಪ್ರಾಧ್ಯಾಪಕ ಹೈದರ್ ಅಲಿ, ಪತ್ರಕರ್ತ ಏ.ಕೆ. ಕುಕ್ಕಿಲ, ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯೆ ಹಫ್ಸಾ ಬಾನು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಚರ್ಚಾಗೋಷ್ಠಿಯನ್ನು ನಿರೂಪಿಸಲಿದ್ದಾರೆ.
ಮಧ್ಯಾಹ್ನ 2.00ಕ್ಕೆ ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಅವರ ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ ನಡೆಯಲಿದ್ದು, ವಿವಿಧ ಭಾಗಗಳಿಂದ ಆಗಮಿಸಿರುವ ಕವಿಗಳು ತಮ್ಮ ಕವನಗಳನ್ನು ಮಂಡಿಸಲಿದ್ದಾರೆ. ಮಧ್ಯಾಹ್ನ 3.00ಕ್ಕೆ ಆಳ್ವಾಸ್ ಕಾಲೇಜು ಮೂಡಬಿದರೆಯ ದಫ್ ತಂಡ ಹಾಗೂ ಬ್ಯಾರಿ ಹಾಡುಗಾರರ ತಂಡದಿಂದ ಸಾಂಸ್ಕೃತಿಕ ಸಂಗೀತ ಸಂಭ್ರಮ ನಡೆಯಲಿದೆ.
ಸಂಜೆ 4.00ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬ್ಯಾರಿ ಸಾಹಿತ್ಯ, ಸಮಾಜ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಲವು ಸಾಧಕರಿಗೆ ಸನ್ಮಾನ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಬ್ಯಾರಿ ಇನ್ಫೋ.ಕಾಂನ ಮುಖ್ಯಸ್ಥ ಬಿ.ಎ. ಮುಹಮ್ಮದ್ ಅಲಿ ಮಾಡಲಿದ್ದು, ಅಧ್ಯಕ್ಷತೆಯನ್ನು ಉಮರ್ ಯು.ಹೆಚ್. ವಹಿಸಲಿದ್ದಾರೆ.
ಸಂಜೆ 6.30ರಿಂದ ರಾತ್ರಿ 8.00ರವರೆಗೆ ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ‘ಬ್ರೋಕರ್ ಪೋಕರ್’ ಬ್ಯಾರಿ ನಾಟಕ ಹಾಗೂ ಗುರುಪುರದ ಎಂ.ಜಿ.ಎಂ. ತಾಲೀಮು ತಂಡದ ಪ್ರದರ್ಶನ ಸಮ್ಮೇಳನದ ಆಕರ್ಷಣೆಯಾಗಲಿದೆ.
ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Trending
- ಉಡುಪಿ ಜಿಲ್ಲಾಕಚೇರಿ ಆವರಣದಲ್ಲಿ ದುರಂತ – ವಿದ್ಯುತ್ ಸ್ಪರ್ಶದಿಂದ ಗ್ರಾಮ ಸಹಾಯಕ ಸಾವು; ಸರ್ಕಾರದ ನಿರ್ಲಕ್ಷ್ಯಕ್ಕೆ ತೀವ್ರ ಖಂಡನೆ
- ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಏಪ್ರಿಲ್ 23 ಮತ್ತು 24 ರಂದು ನಡೆಯಲಿದೆ, ಸಿಇಟಿ ಸುವ್ಯವಸ್ಥಿತ ನಡೆಸಲು ಜಿಲ್ಲಾಧಿಕಾರಿ ಸೂಚನೆ
- ತುಳು ಚಲನಚಿತ್ರ “ದೇವ್ ದಾಸ್ ನ ಲೀಲಾ” ಇದೇ ಏಪ್ರಿಲ್ 24ರಂದು ಕರಾವಳಿಯಾದ್ಯಂತ ತೆರೆಗೆ
- ಮಂಗಳೂರಿನಲ್ಲಿ “ಕೊರಗ್ಲಾ ತನಿಯಾ” ಮತ್ತು “ಕನ” ಚಿತ್ರಗಳಿಗೆ ನಾಳೆ ಮುಹೂರ್ತ
- ಮೇ 28–29: ವಿಶ್ವವಿಖ್ಯಾತ ಮಾತಾ ಅಮೃತಾನಂದಮಯಿ ಅಮ್ಮಮಂಗಳೂರಿಗೆ, ಪೂರ್ವಭಾವಿ ಸಾಮೂಹಿಕ ಪ್ರಾರ್ಥನಾ ಸಭೆ ಹಾಗೂ ಶಿವಶಕ್ತಿ ಹೋಮ”.
- ತ್ರಿಶೂರ್ ಪಟಾಕಿ ದುರಂತ: ಪೂರಂ ಪಟಾಕಿ ಪ್ರದರ್ಶನದ ಬಗ್ಗೆ ಸರ್ಕಾರ ತೀರ್ಮಾನ – 24 ಕ್ಕೆ ಏರಿಕೆ
- ಅಲ್ಪಸಂಖ್ಯಾತರನ್ನ ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ಗಾಗಿ ಉಪಯೋಗಿಸಿಕೊಳ್ಳುತ್ತಿದೆ :ನಿಖಿಲ್ ಕುಮಾರಸ್ವಾಮಿ
- ಜನರೊಂದಿಗೆ ಜನತಾದಳ” ಅಭಿಯಾನಕ್ಕೆ ಕಡೂರುನಲ್ಲಿ ಭಾರೀ ಸ್ಪಂದನೆ: ಕಾರ್ಯಕರ್ತರ ಮಹಾಸಂಗಮ
