ಮಂಗಳೂರು: ಹಿರಿಯರ ಜೀವನ ಪದ್ಧತಿ, ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ, ಆರೋಗ್ಯ ಕಾಳಜಿ ಹಾಗೂ ಪ್ರಕೃತಿ ಪ್ರೇಮವನ್ನು ಇಂದಿನ ಯುವಪೀಳಿಗೆಗೆ ಉಳಿಸಿ ಬೆಳೆಸಬೇಕಾಗಿದೆ ಎಂದು ಉಡುಪಿ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಹೇಳಿದರು.
ಕಾವೂರು ಬಂಟರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಬಂಟರ ಮಹಿಳಾ ವಿಭಾಗದ ವತಿಯಿಂದ ನಡೆದ ಆಟಿಡೊಂಜಿ ದಿನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಕುಟುಂಬದ ನಿರ್ವಹಣೆಯಲ್ಲಿ ಅತ್ಯಂತ ಜಾಣ್ಮೆ ಹೊಂದಿದ್ದರು. ಮಳೆಗಾಲದಲ್ಲಿ ಅಗತ್ಯವಿರುವ ಪ್ರತಿಯೊಂದು ವಸ್ತುವನ್ನು ಮುಂಗಡವಾಗಿ ಸಂಗ್ರಹಿಸಿ, ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಜೀವನ ನಡೆಸುತ್ತಿದ್ದರು. ಅಂದಿನ ಆಹಾರ ಪದ್ಧತಿಯಿಂದಾಗಿ ಅವರು ದೀರ್ಘಾಯುಷ್ಯವನ್ನು ಹೊಂದಿದ್ದರು ಎಂದು ಅವರು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಮಧು ಕನ್ಸ್ಟ್ರಕ್ಷನ್ನ ವಿಜಯಲಕ್ಷ್ಮೀ ಎಂ. ಮಲ್ಲಿ, ತುಳುನಾಡಿನ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಶ್ಲಾಘನೀಯವಾಗಿದೆ. ಹಿರಿಯರ ಜೀವನಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳಿಂದ ಅದು ಸಾಧ್ಯವಾಗುತ್ತದೆ ಎಂದರು.
ಆಟಿಡೊಂಜಿ ಕೂಟ ಸಮಾರಂಭವನ್ನು ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಡಾರ್ ಉದ್ಘಾಟಿಸಿ ಚಾಲನೆ ನೀಡಿದರು.
ಸನ್ಮಾನ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ
ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಸಂಸ್ಥೆಯಾದ ಏಷ್ಯಾ ಇಂಟೆಕ್ ನ್ಯಾಷನಲ್ ವತಿಯಿಂದ ಗೌರವ ಡಾಕ್ಟರೇಟ್ ಪಡೆದ ಶ್ರೀಮತಿ ಸುಖಲತಾ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಚೆನ್ನೆದ ಮನೆ ಸಹಿತ ತುಳುವರ ಸಾಂಪ್ರದಾಯಿಕ ಆಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಆರೋಗ್ಯ ಪದ್ಧತಿಯ ಹಿಂದಿನ ಕಾಲದ ಊಟೋಪಚಾರಗಳು ನಡೆಯಿತು.
ಶ್ರೀಮತಿ ಹರ್ಷ ಎಸ್. ಶೆಟ್ಟಿ ಮತ್ತು ಹರಿಣಿ ಭಂಡಾರಿ ಪ್ರಾರ್ಥನೆ ನೆರವೇರಿಸಿದರು. ಸುಜಯ ಎಸ್. ಶೆಟ್ಟಿ ಸ್ವಾಗತಿಸಿದರು. ರೇಖಾ ವಿ. ಶೆಟ್ಟಿ ಧನ್ಯವಾದ ಅರ್ಪಿಸಿದರು. ಗೀತಾ ವಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
.
,
.
.
.

