ಮಂಗಳೂರು : ನಮ್ಮೊಳಗಿನ ಜಾತಿ, ಧರ್ಮ, ಭಾಷೆಯ ವೈವಿಧ್ಯತೆಯನ್ನು ಜೊತೆಗಿರಿಸಿಕೊಂಡು ನಾವೆಲ್ಲರೂ ಒಂದೇ ಅನ್ನುವ ಸೌಹರ್ದತೆಯ ಸಮಾಜವನ್ನು ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವಜನರ ಜವಬ್ದಾರಿ ಮಹತ್ವವಾದುದು ಎಂದು ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಇಸ್ಮಾಯಿಲ್ ಅವರು ಹೇಳಿದರು.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುನಾಡಿನ ಸೌಹಾರ್ದ ಬದುಕಿನ ಬಗ್ಗೆ ರಂಗಚಲನ ತಂಡದ ಮೂಲಕ ನಿರ್ಮಾಣಗೊಂಡ “ಜಾಗ್ ರ್ತೆ” ತುಳು ನಾಟಕದ ಪ್ರಥಮ ಪ್ರದರ್ಶನವನ್ನು ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಉದ್ಘಾಟಿಸಿ ಮಾತನಾಡಿದರು.
ನಾವು ಕತ್ತರಿಸುವ ಕತ್ತರಿ ಆಗಬಾರದು ಹೊಲಿದು ಒಟ್ಟುಗೂಡಿಸುವ ಸೂಜಿ ದಾರ ಆಗಬೇಕು, ನಮ್ಮ ಜಾತಿ ಧರ್ಮ ಮನೆಯಲ್ಲಿ ಮತ್ತು ಆರಾಧನಾಲಯಗಳಲ್ಲಿ ಮಾತ್ರ ಇರಬೇಕು, ಹೊರತಾಗಿ ಸಮಾಜದಲ್ಲಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಇರಬೇಕು. ಧರ್ಮ, ಜಾತಿ ಭಾಷೆ ಯಾವುದೇ ಇರಲಿ ಮನುಷ್ಯರು ಒಂದೇ, ಅದನ್ನು ಸಾರುವ ಪ್ರಯತ್ನ ತುಳು ಅಕಾಡೆಮಿ ಈ ನಾಟಕದ ಮೂಲಕ ಮಾಡುತ್ತಿದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳುನಾಡಿನ ಸೌಹಾರ್ದ ಪರಂಪರೆಯ ಬಗ್ಗೆ ವಿದ್ಯಾರ್ಥಿ ಯುವಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತುಳು ಅಕಾಡೆಮಿಯು ಎರಡು ಹೊಸ ನಾಟಕಗಳನ್ನು ನಿರ್ಮಾಣ ಮಾಡಿದೆ ಎಂದು ತಿಳಿಸಿದರು.
ನಾಟಕ ಹಾಗೂ ಚಲನಚಿತ್ರ ನಟಿ ಸುನೀತಾ ಎಕ್ಕೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಂಗ ಸಂಚಲನ ನಿರ್ದೇಶಕ ದಿನೇಶ್ ಅತ್ತಾವರ, ಅಕಾಡೆಮಿ ಸದಸ್ಯರಾದ ಬೂಬ ಪೂಜಾರಿ, ಕುಂಬ್ರ ದುರ್ಗಾಪ್ರಸಾದ್ ರೈ, ಮಿಲಾಗ್ರಿಸ್ ಪ್ರೌಢಶಾಲೆಯ ಪ್ರಾಂಶುಪಾಲರಾದ ಫಾ.ಉದಯ್ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.
ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ಸಂತೋಷ್ ಶೆಟ್ಟಿ ಹಿರಿಯಡ್ಕ ನಿರೂಪಿಸಿದರು. ಮಿಲಾಗ್ರಿಸ್ ಪಿಯು ಕಾಲೇಜ್ ಪ್ರಾಂಶುಪಾಲರಾದ ಮೇಲ್ವಿನ್ ವಾಸ್ ವಂದಿಸಿದರು.
