ಬೆಂಗಳೂರು/ಮಂಗಳೂರು: ಲೈಂಗಿಕವಾಗಿ ಸಹಕರಿಸಲು ನಿರಾಕರಿಸಿದ್ದ ಮಂಗಳೂರಿನ ಕಾವೂರು ನಿವಾಸಿ ಟೆಕ್ಕಿ ಶರ್ಮಿಳಾ (35) ಅವರನ್ನು ಕೊಂದು, ಸಾಕ್ಷ್ಯ ನಾಶಪಡಿಸಲು ಫ್ಲಾಟ್ಗೆ ಬೆಂಕಿ ಹಚ್ಚಿದ್ದ 18 ವರ್ಷದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ಬೆಂಗಳೂರಿನ ಫ್ಲಾಟ್ನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಶರ್ಮಿಳಾ ಮೃತಪಟ್ಟಿದ್ದಾರೆ ಎಂದು ಮೊದಲಿಗೆ ಶಂಕಿಸಲಾಗಿದ್ದರೂ, ಇದೀಗ ಅದು ಪೂರ್ವನಿಯೋಜಿತ ಹತ್ಯೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶರ್ಮಿಳಾ ಅವಿವಾಹಿತರಾಗಿದ್ದು, ಸುಬ್ರಹ್ಮಣ್ಯ ಲೇಔಟ್ನ ಸಂಕಲ್ಪ ನಿಲಯದಲ್ಲಿರುವ ಎರಡು ಬೆಡ್ರೂಮ್ ಫ್ಲಾಟ್ನಲ್ಲಿ ವಾಸವಿದ್ದರು. ಅವರು ಬೆಂಗಳೂರಿನ ಪ್ರಮುಖ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜನವರಿ 3ರ ರಾತ್ರಿ 10.15 ರಿಂದ 10.45ರ ಅವಧಿಯಲ್ಲಿ ಅವರ ಫ್ಲಾಟ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ, ಶರ್ಮಿಳಾ ಅವರ ಸುಟ್ಟ ದೇಹವನ್ನು ಪತ್ತೆಹಚ್ಚಿತ್ತು.
ಆ ಸಮಯದಲ್ಲಿ ಶರ್ಮಿಳಾ ಅವರ ರೂಮ್ಮೇಟ್ 2025ರ ನವೆಂಬರ್ 14ರಿಂದ ಅಸ್ಸಾಂನ ತಮ್ಮ ತವರು ಮನೆಯಲ್ಲಿ ಇದ್ದ ಕಾರಣ, ಪ್ರಾರಂಭದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಶರ್ಮಿಳಾ ಅವರ ಸ್ನೇಹಿತರೊಬ್ಬರು ಇದು ದುರುದ್ದೇಶಪೂರಿತ ಕೃತ್ಯವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ, ರಾಮಮೂರ್ತಿ ನಗರ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ತನಿಖೆಯಲ್ಲಿ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದೆ. ಶರ್ಮಿಳಾ ಅವರ ನೆರೆಮನೆಯವನಾದ ಕೇರಳ ಮೂಲದ ಕರ್ಣಲ್ ಕುರೈ (18) ಎಂಬಾತ, ಘಟನೆ ನಡೆದ ರಾತ್ರಿ ಸುಮಾರು 9 ಗಂಟೆಗೆ ಕಿಟಕಿಯ ಮೂಲಕ ಫ್ಲಾಟ್ಗೆ ನುಗ್ಗಿದ್ದ. ಶರ್ಮಿಳಾ ಅವರನ್ನು ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದಾನೆ. ಶರ್ಮಿಳಾ ನಿರಾಕರಿಸಿದಾಗ, ಆಕೆಯ ಬಾಯಿ ಹಾಗೂ ಮೂಗನ್ನು ಬಿಗಿಯಾಗಿ ಹಿಡಿದು ಅರೆಪ್ರಜ್ಞಾವಸ್ಥೆಗೆ ತಳ್ಳಿದ್ದಾನೆ. ಈ ವೇಳೆ ನಡೆದ ಜಗಳದಲ್ಲಿ ಶರ್ಮಿಳಾಗೆ ಗಂಭೀರ ಗಾಯಗಳಾಗಿ ರಕ್ತಸ್ರಾವ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ತನ್ನ ಕೃತ್ಯವನ್ನು ಮರೆಮಾಚಲು ಆರೋಪಿ ಫ್ಲಾಟ್ಗೆ ಬೆಂಕಿ ಹಚ್ಚಿ, ಶರ್ಮಿಳಾ ಅವರ ಮೊಬೈಲ್ ಫೋನ್ನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ಆರೋಪಿ ಪಿಯುಸಿ ವಿದ್ಯಾರ್ಥಿಯಾಗಿದ್ದು, ತನ್ನ ತಾಯಿಯೊಂದಿಗೆ ವಾಸವಿದ್ದ. ಪೊಲೀಸರು ಆತನನ್ನು ಮನೆಯಲ್ಲಿ ಬಂಧಿಸಿ, ಮೂರು ದಿನಗಳ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ನಗರದಲ್ಲಿ ಭದ್ರತೆ ಹಾಗೂ ಮಹಿಳಾ ಸುರಕ್ಷತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.
