ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧಾರ್ ನ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನವೊಂದು ಕಮರಿಗೆ ಉರುಳಿದ ಪರಿಣಾಮ ಐವರು ಯೋಧರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಸಂಜೆ 5:30ಕ್ಕೆ 300 ಅಡಿ ಕಂದಕಕ್ಕೆ ಸೇನಾ ವಾಹನ ಬಿದ್ದು ಮರಾಠಾ ರೆಜಿಮೆಂಟ್ನ (Maratha Light Infantry) ಐವರು ಮೃತಪಟ್ಟಿದ್ದರು. ಐವರು ಪೈಕಿ ಮೂವರು ಕರ್ನಾಟಕದವರಾಗಿದ್ದಾರೆ.ಬೆಳಗಾವಿ ಪಂತ ಬಾಳೇಕುಂದ್ರಿ ದಯಾನಂದ ತಿರಕನ್ನವರ್, ಮುಧೋಳದ ಮಹಾಲಿಂಗಪುರದ ಮಹೇಶ್ ಮರಿಗೊಂಡ, ಕುಂದಾಪುರ ಬೀಜಾಡಿಯ ಅನುಪ್ ಮೃತರಾಗಿದ್ದಾರೆ. ಸೈನಿಕರು ಮೃತಪಟ್ಟ ಬಗ್ಗೆ ಭಾರತೀಯ ಸೇನೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ.
ಅನೂಪ್ ಕುಟುಂಬಕ್ಕೆ ಸೇನಾಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. ಕಳೆದ 13 ವರ್ಷಗಳಿಂದ ಅನೂಪ್ ಸೇನೆಯಲ್ಲಿದ್ದು 2 ವರ್ಷದ ಹಿಂದೆ ವಿವಾಹವಾಗಿತ್ತು. ದಂಪತಿಗೆ 1 ವರ್ಷದ ಮಗುವಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸರಿಗೂ ಸೇನೆಯಿಂದ ಮಾಹಿತಿ ಕಳುಹಿಸಲಾಗಿದೆ.
ಮಹೇಶ್ ನಾಗಪ್ಪ ಮಾರಿಗೊಂಡ (25) ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಿವಾಸಿಯಾಗಿದ್ದರು. 7 ವರ್ಷಗಳಿಂದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಶ್ ಅವರಿಗೆ ಮೂರು ವರ್ಷದ ಹಿಂದೆ ಮದುವೆಯಾಗಿತ್ತು. ನಾಳೆ ಬೆಳಗಾವಿ ಮೂಲಕ ಮಹಾಲಿಂಗಪುರಕ್ಕೆ ಪಾರ್ಥಿವ ಶರೀರ ಬರಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ
ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದಿತ್ತು. ಘರೋವಾ ಪ್ರದೇಶದಲ್ಲಿ ಸಂಜೆ 5:20 ರ ಸುಮಾರಿಗೆ ಆರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿದ್ದ ಸೇನಾ ವಾಹನವು ಜಿಲ್ಲೆಯ ಬನೋಯ್ಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು