(ತುಳುನಾಡ ಸೂರ್ಯ) ಮಂಗಳೂರು: ಭರತನಾಟ್ಯದ ಸಂಪ್ರದಾಯವನ್ನು ಹೊಸ ತಲೆಮಾರಿಗೆ ರವಾನಿಸುವ ಭರವಸೆಯೊಂದಿಗೆ ವಿದುಷಿ ಶ್ರೀಯಾ ರಾವ್ ಸಣ್ಣಯ್ಯ ಅವರ ರಂಗಪ್ರವೇಶ ಸಮಾರಂಭ ರವಿವಾರ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿಜೃಂಭಣೆಯಿಂದ ನೆರವೇರಿತು.
ನೃತ್ಯ ಸುಧಾ ಮಂಗಳೂರು ಸಂಸ್ಥೆಯ ಸ್ಥಾಪಕಿ ಹಾಗೂ ಹಿರಿಯ ನೃತ್ಯಗುರು ವಿದುಷಿ ಸೌಮ್ಯಾ ಸುಧೀಂದ್ರ ರಾವ್ ಅವರ ಪುತ್ರಿ ಮತ್ತು ಶಿಷ್ಯೆ ಆಗಿರುವ ಶ್ರೀಯಾ, ತಮ್ಮ ತಾಯಿಯ ಮಾರ್ಗದರ್ಶನದಲ್ಲಿ ಸಂಪೂರ್ಣ ಸಿದ್ಧತೆಯೊಂದಿಗೆ ರಂಗಪ್ರವೇಶ ಮಾಡಿ ದರು. ಕಾರ್ಯಕ್ರಮದಲ್ಲಿ ಭರತನಾಟ್ಯದ ಸಂಪ್ರದಾಯ ಬದ್ಧ ಪ್ರದರ್ಶನಗಳನ್ನು ಮುಂದಿಟ್ಟುಕೊಂಡು ಅವರು ತಮ್ಮ ಕಲಾಪ್ರತಿಭೆಯನ್ನು ತೋರಿಸಿದರು.
ಹಿರಿಯ ನೃತ್ಯಗುರು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರು ಮಾತನಾಡಿ, “ಶ್ರೀಯಾ ಕಲೆಯನ್ನೇ ಮೈಗೂಡಿಸಿಕೊಂಡು ಹುಟ್ಟಿದಂತಹ ಕಲಾವಿದೆ. ಸನಾತನ ಭರತನಾಟ್ಯದ ಸಂಪ್ರದಾಯವನ್ನು ಮುಂದುವರೆಸುವ ಶಕ್ತಿ ಮತ್ತು ಭಕ್ತಿ ಅವರಲ್ಲಿದೆ. ರಂಗಪ್ರವೇಶದಲ್ಲಿ ಹಿರಿಯರು ನೀಡಿದ ನೃತ್ಯ ಬಂಧಗಳನ್ನು ಅವರು ಅತ್ಯಂತ ಸುಂದರವಾಗಿ ಉಳಿಸಿಕೊಂಡಿದ್ದಾರೆ” ಎಂದು ಪ್ರಶಂಸಿಸಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶ್ರೀಯಾ ಅವರ ಭವಿಷ್ಯಕ್ಕೆ ಶುಭ ಹಾರೈಸಿ, “ಭರತನಾಟ್ಯ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಿ, ದ.ಕ. ಜಿಲ್ಲೆಯ ಹೆಸರು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಲಿ” ಎಂದು ಆಶಿಸಿದರು.
ಮೈಸೂರಿನ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ನ ನಿರ್ದೇಶಕ ಪ್ರೊ. ಕೆ. ರಾಮಮೂರ್ತಿ ರಾವ್ ಅವರು, “ಕಲಾವಿದೆಗೆ ಉತ್ಸಾಹವೇ ಮುಖ್ಯ. ಶ್ರೀಯಾ ಅವರಲ್ಲಿ ವರ್ಣದ ಕೊನೆಯವರೆಗೂ ಉತ್ಸಾಹ ಕಡಿಮೆಯಾಗಲಿಲ್ಲ. ನೃತ್ಯಕ್ಕೆ ಭಾಷೆಯ ಬೇಲಿ ಇಲ್ಲದ ಕಾರಣ ಕನ್ನಡ ಸಾಹಿತ್ಯದೊಂದಿಗಿನ ಪ್ರದರ್ಶನ ವಿಶೇಷವಾಯಿತು. ತಾಯಿ-ಮಗಳ ಈ ಸೇವೆ ಮುಂದುವರಿಯಲಿ” ಎಂದು ಹೇಳಿದರು.
ಸಂಸ್ಥೆಯ ಸ್ಥಾಪಕಿ ವಿದುಷಿ ಸೌಮ್ಯಾ ಸುಧೀಂದ್ರ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಶ್ರೀಯಾ ಅತ್ಯಂತ ಶಿಸ್ತುಬದ್ಧಳು. ನೃತ್ಯ, ಸಹನೆ, ಶಿಸ್ತು ಮತ್ತು ಸಂಸ್ಕಾರಗಳನ್ನು ತನ್ನಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದಾಳೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಯಾ ಅವರು ತಮ್ಮ ಮೃದಂಗ ಗುರು ವಿದ್ವಾನ್ ರವಿಕುಮಾರ್ ಕುಂಜೂರು ಹಾಗೂ ಗುರು-ತಾಯಿ ಸೌಮ್ಯಾ ಸುಧೀಂದ್ರ ರಾವ್ ಅವರಿಗೆ ಭಕ್ತಿಯಿಂದ ಗುರುವಂದನೆ ಸಲ್ಲಿಸಿದರು.
ಸಭೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ, ಚಲನಚಿತ್ರ ಕಲಾವಿದರು ದಯಾ ಶೆಟ್ಟಿ, ವಾಸು ಹರೀಶ್ ಶೆಟ್ಟಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಂಸ್ಥೆಯ ಅಧ್ಯಕ್ಷ ಡಾ. ಸುಧೀಂದ್ರ ರಾವ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ದಾಮೋದರ ಶರ್ಮ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ರಂಗಪ್ರವೇಶದ ಮೂಲಕ ಶ್ರೀಯಾ ರಾವ್ ಸಣ್ಣಯ್ಯ ಅವರು ಭರತನಾಟ್ಯದಲ್ಲಿ ತಮ್ಮ ಪಯಣವನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ಇದು ಮಂಗಳೂರಿನ ಸಾಂಸ್ಕೃತಿಕ ವಲಯಕ್ಕೆ ಹೊಸ ಆಶಾಕಿರಣವಾಗಿದೆ. ಇವರಿಗೆ ತುಳುನಾಡ ಸೂರ್ಯ ಪತ್ರಿಕೆ ಶುಭ ಹಾರೈಸುತ್ತದೆ.
Trending
- ಮಂಗಳೂರು :ನಾಗೋರಿ ಭೂಕುಸಿತ ಹಾಗೂ ಸೋಮೇಶ್ವರ ಕಡಲುಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೆಗೌಡ, ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಶಿಫಾರಸು – ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
- ಬಿ.ಸಿ.ರೋಡ್ನಲ್ಲಿ ಯುವತಿಯ ಭೀಕರ ಹತ್ಯೆ,ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಮಾರಕಾಸ್ತ್ರದಿಂದ ದಾಳಿ; ಆರೋಪಿ ಪರಾರಿ – ವ್ಯಾಪಕ ತನಿಖೆ ಆರಂಭ
- ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಣೆ,ಪಕ್ಷ ಸಂಘಟನೆಗೆ ಮತ್ತಷ್ಟು ವೇಗ ನೀಡಲಾಗುವುದು: ಎನ್.ಪಿ. ಪುಷ್ಪರಾಜನ್
- ಡಿ.ಕೆ. ಟ್ರಾನ್ಸ್ಪೋರ್ಟ್ & ಲಾಜಿಸ್ಟಿಕ್ ಸರ್ವೀಸಸ್ಗೆ ಯಶಸ್ವಿ ಒಂದು ವರ್ಷದ ಸಂಭ್ರಮ,ವಿಶ್ವಾಸ, ಸಮಯಪಾಲನೆ ಮತ್ತು ಗುಣಮಟ್ಟದ ಸೇವೆಯಿಂದ ಸಾರಿಗೆ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು
- ಸಂತ್ರಸ್ತ ಕುಲಾಲ ಕುಟುಂಬಕ್ಕೆ ನಿವೇಶನ ಸಹಿತ ‘ಕುಂಭ ಕುಟೀರ’ ಮನೆ ಹಸ್ತಾಂತರ,ಕರ್ನಾಟಕ ರಾಜ್ಯ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಮಾನವೀಯ ಸೇವೆಯ ಮಾದರಿ
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಭೇಟಿ
- ಪುತ್ತೂರು: ಜೆಡಿಎಸ್ ಮಹಿಳಾ ಘಟಕದ ಸಭೆ: ಪಕ್ಷ ಸಂಘಟನೆಗೆ ಒತ್ತು, ಹೊಸ ಸದಸ್ಯರ ಸೇರ್ಪಡೆ
- ತುಳುನಾಡ ರಕ್ಷಣಾ ವೇದಿಕೆ ಬ್ರಹ್ಮಾವರ ತಾಲೂಕು ಸಭೆ: ಸಂಘಟನೆ ಬಲವರ್ಧನೆಗೆ ಒತ್ತು

