ಕುಂದಾಪುರ: ತಾಲೂಕಿನ ವಂತ್ಸೆ ಹೋಬಳಿ ಹೊಸೂರು ಗ್ರಾಮದ ಸರ್ವೆ ನಂಬರ್ 141ರ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸಲು ಕಂದಾಯ ಇಲಾಖೆಯ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದು ಆರೋಪಿಸಿ, ದಲಿತ ಪರ ಹೋರಾಟಗಾರ್ತಿ ನಾಗರತ್ನ ನೇತೃತ್ವದಲ್ಲಿ ಕುಂದಾಪುರ ಉಪ ವಿಭಾಗ ಸಹಾಯಕ ಕಮಿಷನರ್ (AC) ಕಚೇರಿ ಮುಂದೆ ಇಂದಿನಿಂದ “ಒಲೆ ಹೂಡಿ – ಅನ್ನ ಬೇಯಿಸುವ” ವಿಭಿನ್ನ ಹಾಗೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.
ರಾಜ್ಯ ಕಂದಾಯ ಸಚಿವರಿಗೆ ಉಪ ವಿಭಾಗಾಧಿಕಾರಿಗಳ ಮೂಲಕ ಹಕ್ಕೊತ್ತಾಯ ಪತ್ರ ಸಲ್ಲಿಸಿರುವ ಪ್ರತಿಭಟನಾಕಾರರು, ಸರ್ಕಾರಿ ಜಮೀನು ಒತ್ತುವರಿಗೆ ನೇರ ಸಹಕಾರ ನೀಡಿದ ವಂಡ್ರೆ ಹೋಬಳಿ ಕಂದಾಯ ನಿರೀಕ್ಷಕ (FDA) ರಾಘವೇಂದ್ರ ಮತ್ತು ಕರ್ತವ್ಯ ಲೋಪ ಎಸಗಿದ ಕುಂದಾಪುರ ತಹಶೀಲ್ದಾರ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಅಕ್ರಮ ಕಟ್ಟಡಗಳನ್ನು ತಕ್ಷಣ ನೆಲಸಮಗೊಳಿಸುವಂತೆ ಆಗ್ರಹಿಸಿದ್ದಾರೆ.
ತಹಸೀಲ್ದಾರ್ ರವರು ಸಹಾಯಕ ಕಮಿಷನರ್ ಪರವಾಗಿ ಮನವಿ ಸ್ವೀಕರಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸೂಚಿಸುತ್ತೇವೆ ಎಂದು ಭರವಸೆ ನೀಡಿದರು. ಒಂದು ವೇಳೆ ನ್ಯಾಯ ಸಿಗದೇ ಇದ್ದ ಪಕ್ಷದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಲವು ಸಂಘಟನೆ ಮೂಲಕ ಬೃಹತ ಮಟ್ಟದ ಪತ್ರಿಭಟನೆಗೂ ಸಿದ್ದ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಧರಣಿ ನಡೆಯುವ ಸ್ಥಳಕ್ಕೆ ವಿವಿಧ ಸಂಘಟನೆ ಭೇಟಿ ನೀಡಿ ದಲಿತ ಹೋರಾಟಗಾರ್ತಿ ನಾಗರತ್ನರವರಿಗೆ ಬೆಂಬಲ ಸೂಚಿಸಿದೆ. ಕುಂದಾಪುರ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಹಾಗೂ ಉಡುಪಿ ಸಾಮಾಜಿಕ ಕಾರ್ಯಕರ್ತೆ ವಿನುತಾ ಕಿರಣ್ ಮತ್ತು ಸಂಗಡಿಗರು, KRS ಉಪಾಧ್ಯಕ್ಷರು ಮುಕಾಂಬಿಕ ಮೊಗವೀರ, ತಿಲೋತ್ತಮ್ ಟೀಚರ್, ದಲಿತ ಸಂಘರ್ಷ ಸಮಿತಿ ರಘು ಶಿರೂರು, ರಘು ಹೆರಂಜಾಲು, ಶಶಿ ಬಲ್ಕೂರು, ಅನಿಲ್ ಮದ್ದುಗುಡ್ಡೆ, ಇಕ್ಬಾಲ್ ಕುಂಜಿಬೆಟ್ಟು, ಮಂಜುನಾಥ್ ತೆಕಟ್ಟೆ, ಹರೀಶ್ ತೆಕಟ್ಟೆ ಉಪಸ್ಥಿತರಿದ್ದರು.

