ಕಡಬ: ಕಡಿಮೆ ಅವಧಿಯಲ್ಲಿ ಹೂಡಿಕೆ ಹಣವನ್ನು ದುಪ್ಪಟ್ಟುಗೊಳಿಸುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ‘ಕಿಂಗ್ಸ್ ಬಜಾರ್’ ಹೆಸರಿನ ಹೂಡಿಕೆ ಯೋಜನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಆರೋಪಿಗಳನ್ನಾಗಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಕಡಬದಲ್ಲಿ ಹೂಡಿಕೆದಾರರನ್ನು ಸೇರಿಸಿ ಸಭೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಸಭೆಗೆ ದಾಳಿ ನಡೆಸಿ, ಅಲ್ಲಿದ್ದವರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಹೂಡಿಕೆ ಯೋಜನೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಹಣಕಾಸಿನ ವ್ಯವಹಾರಗಳ ಮಾಹಿತಿಯನ್ನು ಪರಿಶೀಲಿಸಲಾಗಿದೆ.
ದುಪ್ಪಟ್ಟು ಲಾಭದ ಆಮಿಷ
‘ಕಿಂಗ್ಸ್ ಬಜಾರ್’ ಸಂಸ್ಥೆಯಲ್ಲಿ ಸದಸ್ಯರಾಗಿ ಹಣ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು, ಬೆಲೆಬಾಳುವ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು ಹಾಗೂ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದವರಿಗೆ ಭಾರೀ ಕಮಿಷನ್ ನೀಡಲಾಗುತ್ತದೆ ಎಂದು ಸಾರ್ವಜನಿಕರನ್ನು ಸೆಳೆಯಲಾಗುತ್ತಿತ್ತು ಎನ್ನಲಾಗಿದೆ.
ಸ್ಥಳೀಯವಾಗಿ ಕೆಲವರನ್ನು ಏಜೆಂಟರನ್ನಾಗಿ ನೇಮಿಸಿ, ಅವರ ಮೂಲಕ ಹೊಸ ಸದಸ್ಯರ ಸೇರ್ಪಡೆ ಹಾಗೂ ಹಣ ಸಂಗ್ರಹಿಸುವ ಚಟುವಟಿಕೆ ನಡೆಸಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಏಳು ಮಂದಿ ಆರೋಪಿಗಳು
ಪ್ರಕರಣದಲ್ಲಿ ‘ಕಿಂಗ್ಸ್ ಬಜಾರ್’ ಸಂಸ್ಥೆಯನ್ನು ಮೊದಲ ಆರೋಪಿಯನ್ನಾಗಿ ದಾಖಲಿಸಲಾಗಿದ್ದು, ಸಂಸ್ಥೆಯ ಪ್ರಮುಖರು ಎನ್ನಲಾದ ಸುಭಾಷ್ಣ ಶೆಟ್ಟಾಯ (50), ಗುರುಮೂರ್ತಿ (54), ಸುರೇಶ್ ಆರ್. (55), ಬಾಲಕೃಷ್ಣ ಪಿ. ಹೆಗ್ಡೆ (42), ಕಿರಣ್ ಕುಮಾರ್ (21), ಶ್ರೀನಾಥ್ (48) ಹಾಗೂ ಸಂದೇಶ್ ಸೇರಿದಂತೆ ಏಳು ಮಂದಿಯನ್ನು ಆರೋಪಿಗಳನ್ನಾಗಿ ಸೇರಿಸಲಾಗಿದೆ.
ಕಡಬ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಚಿಟ್ ಫಂಡ್ ಮತ್ತು ಹಣ ಅಕ್ರಮ ವರ್ಗಾವಣೆ ನಿಷೇಧ ಕಾಯ್ದೆ, 1978ರ ಕಲಂ 4, 5 ಮತ್ತು 6 ಅಡಿಯಲ್ಲಿ ತನಿಖೆ ಕೈಗೊಂಡಿದ್ದಾರೆ.
ಹಣದ ಮೂಲ–ವ್ಯವಹಾರಗಳ ತನಿಖೆ
ಸಾರ್ವಜನಿಕರಿಂದ ಎಷ್ಟು ಹಣ ಸಂಗ್ರಹಿಸಲಾಗಿದೆ, ಹಣವನ್ನು ಯಾವ ರೀತಿಯಲ್ಲಿ ಬಳಸಲಾಗಿದೆ, ಹೂಡಿಕೆದಾರರಿಗೆ ನೀಡುವುದಾಗಿ ಭರವಸೆ ನೀಡಿದ್ದ ಲಾಭದ ಸ್ವರೂಪವೇನು ಹಾಗೂ ಸಂಸ್ಥೆಯ ಹಣಕಾಸಿನ ವ್ಯವಹಾರಗಳು ಕಾನೂನುಬದ್ಧವಾಗಿವೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹೂಡಿಕೆ ಹೆಸರಿನಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಹಣ ಸಂಗ್ರಹಿಸುವ ಯಾವುದೇ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
Trending
- ಕಡಬದಲ್ಲಿ ‘ಕಿಂಗ್ಸ್ ಬಜಾರ್’ ಹೆಸರಿನಲ್ಲಿ ಹೂಡಿಕೆ ವಂಚನೆ ಆರೋಪ: ಸಭೆಗೆ ಪೊಲೀಸ್ ದಾಳಿ; ಏಳು ಮಂದಿ ವಿರುದ್ಧ ಪ್ರಕರಣ
- ಜಿಲ್ಲಾ ಬ್ಯಾಂಕ್ನಿಂದ ಉಪ್ಪೂರು ಸಹಕಾರಿ ಸಂಘಕ್ಕೆ ಪ್ರತಿಷ್ಠಿತ ಸಾಧನಾ ಪ್ರಶಸ್ತಿ
- ಮಲ್ಪೆ ಬಂದರಿನಲ್ಲಿ ಮೀನುಗಾರ ಕಾರ್ಮಿಕನ ಕೊಲೆಬೋಟಿನ ಕ್ಯಾಬಿನ್ನಲ್ಲೇ ಚೂರಿ ಇರಿತ; ಪರಾರಿಯಾಗುತ್ತಿದ್ದ ಆರೋಪಿ ರೈಲು ನಿಲ್ದಾಣದಲ್ಲಿ ಬಂಧನ
- ₹5 ಕೋಟಿಗೂ ಅಧಿಕ ಹಣ ಸಂಗ್ರಹದ ಲೆಕ್ಕಪತ್ರ ಎಲ್ಲಿದೆ? — ಮಂಗಳಾ ಸ್ವಿಮ್ಮಿಂಗ್ ಕ್ಲಬ್ ವಿರುದ್ಧ ಮಾಜಿ ಕಾರ್ಯದರ್ಶಿ ಆರ್. ಧನರಾಜ್ ಆರೋಪ
- ಮುದರಂಗಡಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಮುಂಬೈ ನಟೋರಿಯಸ್ ಗ್ಯಾಂಗ್ಸ್ಟರ್ ಅನುಜ್ ಪಾಟೀಲ್ ಬಂಧನ
- ಆಟಿದ ಐಸಿರಿ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರಿಗೆ ಗೌರವ ಅಭಿನಂದನೆ
- 30–50ರ ವಯೋಮಾನದವರಲ್ಲಿ ಸ್ಟ್ರೋಕ್ ಪ್ರಕರಣಗಳ ಏರಿಕೆ; ‘ಸುವರ್ಣಾವಧಿ’ಯಲ್ಲಿ ಚಿಕಿತ್ಸೆ ಪಡೆಯಲು ಕರೆ
- ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆ ಖಂಡನೀಯ: ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಉಡುಪಿ ಪತ್ರಕರ್ತರ ಸಂಘ ಆಗ್ರಹ

