ಕಡಬ: ಕಡಿಮೆ ಅವಧಿಯಲ್ಲಿ ಹೂಡಿಕೆ ಹಣವನ್ನು ದುಪ್ಪಟ್ಟುಗೊಳಿಸುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ‘ಕಿಂಗ್ಸ್ ಬಜಾರ್’ ಹೆಸರಿನ ಹೂಡಿಕೆ ಯೋಜನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಆರೋಪಿಗಳನ್ನಾಗಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಕಡಬದಲ್ಲಿ ಹೂಡಿಕೆದಾರರನ್ನು ಸೇರಿಸಿ ಸಭೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಸಭೆಗೆ ದಾಳಿ ನಡೆಸಿ, ಅಲ್ಲಿದ್ದವರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಹೂಡಿಕೆ ಯೋಜನೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಹಣಕಾಸಿನ ವ್ಯವಹಾರಗಳ ಮಾಹಿತಿಯನ್ನು ಪರಿಶೀಲಿಸಲಾಗಿದೆ.
ದುಪ್ಪಟ್ಟು ಲಾಭದ ಆಮಿಷ
‘ಕಿಂಗ್ಸ್ ಬಜಾರ್’ ಸಂಸ್ಥೆಯಲ್ಲಿ ಸದಸ್ಯರಾಗಿ ಹಣ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು, ಬೆಲೆಬಾಳುವ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು ಹಾಗೂ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದವರಿಗೆ ಭಾರೀ ಕಮಿಷನ್ ನೀಡಲಾಗುತ್ತದೆ ಎಂದು ಸಾರ್ವಜನಿಕರನ್ನು ಸೆಳೆಯಲಾಗುತ್ತಿತ್ತು ಎನ್ನಲಾಗಿದೆ.
ಸ್ಥಳೀಯವಾಗಿ ಕೆಲವರನ್ನು ಏಜೆಂಟರನ್ನಾಗಿ ನೇಮಿಸಿ, ಅವರ ಮೂಲಕ ಹೊಸ ಸದಸ್ಯರ ಸೇರ್ಪಡೆ ಹಾಗೂ ಹಣ ಸಂಗ್ರಹಿಸುವ ಚಟುವಟಿಕೆ ನಡೆಸಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಏಳು ಮಂದಿ ಆರೋಪಿಗಳು
ಪ್ರಕರಣದಲ್ಲಿ ‘ಕಿಂಗ್ಸ್ ಬಜಾರ್’ ಸಂಸ್ಥೆಯನ್ನು ಮೊದಲ ಆರೋಪಿಯನ್ನಾಗಿ ದಾಖಲಿಸಲಾಗಿದ್ದು, ಸಂಸ್ಥೆಯ ಪ್ರಮುಖರು ಎನ್ನಲಾದ ಸುಭಾಷ್ಣ ಶೆಟ್ಟಾಯ (50), ಗುರುಮೂರ್ತಿ (54), ಸುರೇಶ್ ಆರ್. (55), ಬಾಲಕೃಷ್ಣ ಪಿ. ಹೆಗ್ಡೆ (42), ಕಿರಣ್ ಕುಮಾರ್ (21), ಶ್ರೀನಾಥ್ (48) ಹಾಗೂ ಸಂದೇಶ್ ಸೇರಿದಂತೆ ಏಳು ಮಂದಿಯನ್ನು ಆರೋಪಿಗಳನ್ನಾಗಿ ಸೇರಿಸಲಾಗಿದೆ.
ಕಡಬ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಚಿಟ್ ಫಂಡ್ ಮತ್ತು ಹಣ ಅಕ್ರಮ ವರ್ಗಾವಣೆ ನಿಷೇಧ ಕಾಯ್ದೆ, 1978ರ ಕಲಂ 4, 5 ಮತ್ತು 6 ಅಡಿಯಲ್ಲಿ ತನಿಖೆ ಕೈಗೊಂಡಿದ್ದಾರೆ.
ಹಣದ ಮೂಲ–ವ್ಯವಹಾರಗಳ ತನಿಖೆ
ಸಾರ್ವಜನಿಕರಿಂದ ಎಷ್ಟು ಹಣ ಸಂಗ್ರಹಿಸಲಾಗಿದೆ, ಹಣವನ್ನು ಯಾವ ರೀತಿಯಲ್ಲಿ ಬಳಸಲಾಗಿದೆ, ಹೂಡಿಕೆದಾರರಿಗೆ ನೀಡುವುದಾಗಿ ಭರವಸೆ ನೀಡಿದ್ದ ಲಾಭದ ಸ್ವರೂಪವೇನು ಹಾಗೂ ಸಂಸ್ಥೆಯ ಹಣಕಾಸಿನ ವ್ಯವಹಾರಗಳು ಕಾನೂನುಬದ್ಧವಾಗಿವೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹೂಡಿಕೆ ಹೆಸರಿನಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಹಣ ಸಂಗ್ರಹಿಸುವ ಯಾವುದೇ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
Trending
- ತುಳು ಭಾಷೆಗೆ ಅಧಿಕೃತ ಮಾನ್ಯತೆ: ವಿಶ್ವದಾದ್ಯಂತ ನೆಲೆಸಿರುವ ತುಳುವರ ಕಾತರ ಸೆ.18ರ ಮಂಗಳೂರು ಸಚಿವ ಸಂಪುಟ ಸಭೆಯಲ್ಲಿ ಸುದಿನದ ನಿರ್ಧಾರ ಹೊರಬರಲಿ: ಪುರುಷೋತ್ತಮ್ ಚೇಂಡ್ಲಾ
- ನಾಗರಿಕ ವೇದಿಕೆ ನರ್ನಾಡು–ಮದಗ ಲೇಔಟ್ನ 4ನೇ ವರ್ಷದ ಗಣೇಶೋತ್ಸವ ವಿಜೃಂಭಣೆಯಿಂದ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ, ಸಮಾಜ ಸೇವಕರಿಗೆ ಸನ್ಮಾನ
- ವಿಘ್ನವಿನಾಯಕನ ಆಗಮನಕ್ಕೆ ತುಳುನಾಡಿನಲ್ಲಿ ಕಂಗೊಳಿಸಿದೆ ಮನೆಮನೆಗಳಲ್ಲಿ ಭಕ್ತಿ–ಮಂಟಪಗಳಲ್ಲಿ ಸಂಭ್ರಮ; ಶಾಂತಿ, ಸೌಹಾರ್ದಕ್ಕೆ ಪೊಲೀಸ್ ಕಟ್ಟೆಚ್ಚರ
- ಕದ್ರಿ ಮಾರ್ಕೆಟ್ನಲ್ಲಿ ಕೊಂಕಣ್ ಕ್ಯಾಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ಶಾಖೆ ಉದ್ಘಾಟನೆ ಗ್ರಾಹಕರಿಗೆ ಸುಲಭ ಹಣಕಾಸು ಸೇವೆ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ
- ಮಾದಕ ವ್ಯಸನದ ವಿರುದ್ಧ ಮಂಗಳೂರು ಪೊಲೀಸರ ಸಮರ: 9 ಮಂದಿ ಬಂಧನ
- ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಬಂಡೆ ಸ್ಫೋಟ: ಇಬ್ಬರ ಬಂಧನ
- ಡಾ.ಎಂ ಫಾರೂಕ್ ಚಂದ್ರನಗರ ಇವರಿಗೆ ಸುನ್ನಿ ಯುವ ಸಂಘ, ಕೆ.ಎಂ.ಜೆ, ಎಸ್.ಎಸ್.ಎಫ್ ಮಜೂರು ಘಟಕದ ವತಿಯಿಂದ ಸನ್ಮಾನ
- ಸತೀಶ್ ಜಾರಕಿಹೊಳಿ ಆಪ್ತರ ನಿವಾಸ, ಕಚೇರಿಗಳ ಮೇಲೆ ಇ.ಡಿ. ಶೋಧ ₹3.3 ಕೋಟಿ ಲೆಕ್ಕಕ್ಕೆ ಬಾರದ ನಗದು, ₹15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶ

