ಮಂಗಳೂರು ನಗರದ ಹೊರವಲಯದ ಮಳಲಿಪೇಟೆಯ ಪುರಾತನ ಜುಮಾ ಮಸೀದಿಯ ಹಳೆಯ ಕಟ್ಟಡವನ್ನು ಕೆಡವದಂತೆ ಮಂಗಳೂರು ಮೂರನೇ ಅಡಿಷನಲ್ ಸಿವಿಲ್ ಜಡ್ಜ್ ಆ್ಯಂಡ್ ಜೆಎಂಎಫ್ಸಿ ನ್ಯಾಯಾಲಯವು ತಾತ್ಕಾಲಿಕ ಆದೇಶ ನೀಡಿದೆ.
ಮಳಲಿಪೇಟೆಯ ಮಸೀದಿಯ ನವೀಕರಣಕ್ಕೆ ಸಂಘಪರಿವಾರದ ಕಾರ್ಯಕರ್ತರು ಗುರುವಾರ ಅಡ್ಡಿಪಡಿಸಿದ್ದರಲ್ಲದೇ, ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಗ್ರಾಪಂಗೆ ಲಿಖಿತ ದೂರು ನೀಡಿದ್ದರು. ಈ ಮಧ್ಯೆ ಬಜರಂಗದಳ-ವಿಎಚ್ಪಿ ಮುಖಂಡರು ಮಂಗಳೂರಿನ ಸಿವಿಲ್ ನ್ಯಾಯಾಲಯದ ಮೊರೆ ಹೋಗಿ ನವೀಕರಣಕ್ಕೆ ಅನುಮತಿ ನೀಡಬಾರದು ಎಂದು ಮನವಿ ಸಲ್ಲಿಸಿದ್ದರು.
ಈ ಮನವಿಯನ್ನು ಸ್ವೀಕರಿಸಿದ ನ್ಯಾಯಾಲಯವು ಮುಂದಿನ ಆದೇಶದವರೆಗೆ ಮಸೀದಿಯ ಹಳೆಯ ಕಟ್ಟಡವನ್ನು ಕೆಡವಬಾರದು ಎಂದು ಮಸೀದಿಯ ಆಡಳಿತ ಸಮಿತಿಗೆ ತಾತ್ಕಾಲಿಕವಾಗಿ ನಿರ್ಬಂಧಕಾಜ್ಞೆ ಹೊರಡಿಸಿದೆ. ಅಲ್ಲದೇ ಮುಂದಿನ ವಿಚಾರಣೆಯನ್ನು ಜೂನ್ 3ಕ್ಕೆ ನಿಗದಿಪಡಿಸಿದೆ.