ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.), ಮಂಗಳೂರು ಇದರ ಬಜ್ಪೆ ಶಾಖೆಯ 12ನೇ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರವು ರೋಟರಿ ಕ್ಲಬ್ ಬಜ್ಪೆ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜ್ಪೆ, ಕರಂಬಾರು ಹಾಗೂ ಎನ್.ಜಿ.ಒ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇವರ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರು ಸಮಾಜದ ಭವನದಲ್ಲಿ ನಡೆಯಿತು.
ಈ ಶಿಬಿರವನ್ನು ಎನ್.ಜಿ.ಒ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇದರ ಸದಸ್ಯರಾದ ಶ್ರೀಮತಿ ಲಿಲ್ಲಿ ಮೇರಿ ಅವರು ಉದ್ಘಾಟಿಸಿ ಮಾತನಾಡಿ, “ಆರೋಗ್ಯದ ರಕ್ಷಣೆಯು ತುಂಬಾ ಮಹತ್ವದ್ದಾಗಿದೆ. ನಾವು ಆರೋಗ್ಯವಾಗಿದ್ದರೆ ಎಲ್ಲವನ್ನೂ ಸಂಪಾದಿಸಬಹುದು. ಇಂದಿನ ಆಧುನಿಕ ಯುಗದಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರ ನೇತೃತ್ವದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯ” ಎಂದರು.
ರೋಟರಿ ಕ್ಲಬ್ ಬಜ್ಪೆಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಶೆಟ್ಟಿ ಅವರು ಮಾತನಾಡಿ, “ಆರೋಗ್ಯವೇ ಭಾಗ್ಯ. ಆರೋಗ್ಯ ಎಲ್ಲರಿಗೂ ಮುಖ್ಯವಾಗಿದೆ. ಇಂದಿನ ಯುವಜನರಿಗೆ ಬಾಹ್ಯ ಸೌಂದರ್ಯ ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದರೂ, ಆರೋಗ್ಯ ಕಾಪಾಡುವ ಬಗ್ಗೆ ಗಮನ ಕಡಿಮೆ. ಆತ್ಮಶಕ್ತಿ ಸಂಘವು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗದೇ, ಸದಸ್ಯರು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಶಿವರಾಮ ಪೂಜಾರಿ ಅವರು ಮಾತನಾಡಿ, “ಬಜ್ಪೆಯಲ್ಲಿ ಕಳೆದ 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆತ್ಮಶಕ್ತಿ ಸಂಘದ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಇಂತಹ ಶಿಬಿರವನ್ನು ಆಯೋಜಿಸಿರುವುದು ಜನರಿಗೆ ಬಹಳ ಉಪಯುಕ್ತವಾಗಿದೆ” ಎಂದರು.
ಕೆ.ಎಂ.ಸಿ ಆಸ್ಪತ್ರೆಯ ವೈದ್ಯರಾದ ಡಾ. ತಾನಿಯಾ ಗೌಡ ಅವರು ಮಾತನಾಡಿ, “ಈ ಶಿಬಿರದಲ್ಲಿ ಕಣ್ಣು ತಪಾಸಣೆ, ಮಧುಮೇಹ ತಪಾಸಣೆ, ಬಿಪಿ ತಪಾಸಣೆ, ಸಾಮಾನ್ಯ ವೈದ್ಯಕೀಯ ಸಲಹೆ, ಕಿವಿ-ಮೂಗು-ಗಂಟಲು ತಪಾಸಣೆ ಸೇರಿದಂತೆ ಹಲವು ವೈದ್ಯಕೀಯ ಸೇವೆಗಳು ಲಭ್ಯವಿವೆ. ಶಿಬಿರಾರ್ಥಿಗಳು ಇಂತಹ ಶಿಬಿರಗಳನ್ನು ಸದ್ವಿನಿಯೋಗಪಡಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು” ಎಂದರು.
ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ನ ವೈದ್ಯರಾದ ಡಾ. ನವ್ಯ ಅವರು ಮಾತನಾಡಿ, “ಈ ಶಿಬಿರದಲ್ಲಿ ಬಾಯಿ ಮತ್ತು ಹಲ್ಲುಗಳ ತಪಾಸಣೆ, ಹಲ್ಲು ತುಂಬಿಸುವುದು, ಹಲ್ಲು ಶುದ್ಧೀಕರಣ ಸೇರಿದಂತೆ ಸೇವೆಗಳು ಲಭ್ಯವಿವೆ. ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆಗಾಗಿ ಹಸಿರು ಕಾರ್ಡ್ ನೀಡಲಾಗುತ್ತದೆ” ಎಂದು ತಿಳಿಸಿದರು.
ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಅವರು ಮಾತನಾಡಿ, “ಕಳೆದ 14 ವರ್ಷಗಳಿಂದ ಸಂಘವು ಪ್ರತೀ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಇಂತಹ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಿದ್ದು, ಇದು 104ನೇ ಶಿಬಿರವಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಿ ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು” ಎಂದರು.
ಅವರು ಮುಂದುವರೆದು, ಸಂಘದ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯ ಪ್ರಯೋಜನಗಳು ಎಲ್ಲಾ ಶಾಖೆಗಳಲ್ಲಿ ಲಭ್ಯವಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು. ಜೊತೆಗೆ, ಮಂಗಳೂರಿನ ಬೋಳಾರ್ನಲ್ಲಿ ಸಂಘದ 34ನೇ ಶಾಖೆ ಆರಂಭವಾಗಿದ್ದು, ವಿಶೇಷ ಠೇವಣಿ ಯೋಜನೆಗಳು ಹಾಗೂ ಚಿನ್ನಾಭರಣ ಸಾಲಗಳ ಬಗ್ಗೆ ಮಾಹಿತಿ ನೀಡಿದರು. ಮುಂದಿನ ತಿಂಗಳಲ್ಲಿ ಮೂಡಬಿದ್ರಿಯಲ್ಲಿ 35ನೇ ಶಾಖೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆತ್ಮಶಕ್ತಿ ಸಂಘದ ಹಿರಿಯ ಶಾಖಾಧಿಕಾರಿ ಶ್ರೀಮತಿ ರವಿಕಲಾ ಸ್ವಾಗತಿಸಿದರು. ಸಿಬ್ಬಂದಿ ಕುಮಾರಿ ಅನುಜಿತಾ ವಂದಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ನೊಂದಿಗೆ ಕಾರ್ಯದರ್ಶಿ ಶ್ರೀ ವಿಶ್ವನಾಥ ರೇಂಜಾಳ ಕಾರ್ಯಕ್ರಮ ನಿರೂಪಿಸಿದರು.
Trending
- ಅಲ್ಪಸಂಖ್ಯಾತರನ್ನ ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ಗಾಗಿ ಉಪಯೋಗಿಸಿಕೊಳ್ಳುತ್ತಿದೆ :ನಿಖಿಲ್ ಕುಮಾರಸ್ವಾಮಿ
- ಜನರೊಂದಿಗೆ ಜನತಾದಳ” ಅಭಿಯಾನಕ್ಕೆ ಕಡೂರುನಲ್ಲಿ ಭಾರೀ ಸ್ಪಂದನೆ: ಕಾರ್ಯಕರ್ತರ ಮಹಾಸಂಗಮ
- ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 39ನೇ ಫನ್ನೀರ್ ವಾರ್ಡಿನ ಸೆಮಿನರಿ ವೀವ್ 1ನೇ ಅಡ್ಡರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ
- ಜೆಡಿಎಸ್. ದ .ಕ. ಜಿಲ್ಲಾ ಘಟಕದ ನೂತನ ಕಾರ್ಯಧ್ಯಕ್ಷರಾಗಿ ಶಶಿರಾಜ್ ಶೆಟ್ಟಿ ಕೊಳಂಬೆ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಯೋಗಿಶ್ ಶೆಟ್ಟಿ ಜಪ್ಪು ಸೇರಿದಂತೆ ನೂತನ ಜಿಲ್ಲಾ ಸಮಿತಿ ಪದಾಧಿಕಾರಿಗಳ ನೇಮಕ
- ಯಾದಗಿರಿ ದುರಂತ | ಮುಖಾಮುಖಿ ಡಿಕ್ಕಿಗೆ ಬೆಂಕಿ – 9 ಮಂದಿ ಸಾವು
- ವೈಟ್ ಸ್ಟೋನ್ ಶರೀಫ್ ಹಾಜಿಗೆ ಅರ್ಥಪೂರ್ಣ ಸನ್ಮಾನ — ಮನಸೂರೆಗೊಂಡ ಕಾರ್ಯಕ್ರಮ
- ಬೆಂಗಳೂರು ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ಗೆ ಸೇರ್ಪಡೆಗೊಂಡ ಎಂ.ಬಿ.ಎ ವಿದ್ಯಾರ್ಥಿ ಡಾ. ಆರ್ಥಿಕ್ ಕೆದಂಬಾಡಿ
- ಜೆಡಿಎಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆ, ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರಿಗೆ ನಮನ

