ಮಂಗಳೂರು:
ತುಳು ಭಾಷೆ ಮತ್ತು ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ದಿಟ್ಟ ಪರಿಚಯವನ್ನು ತುಳು ಸಾಹಿತ್ಯ ಓದಿನ ಮೂಲಕ ಪಡೆಯಬಹುದು ಎಂದು ಹಿರಿಯ ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ತಲಪಾಡಿಯ ಶಾರದಾ ಕಾಲೇಜಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ’ ಅಭಿಯಾನದ ಹತ್ತನೇ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ರಾಮಾಯಣ ಕಾಲದಿಂದ ಇಂದಿನ ಆಧುನಿಕ ದಿನಗಳವರೆಗೆ ತುಳು ಭಾಷೆ ಮತ್ತು ಜ್ಞಾನ ಪರಂಪರೆಯ ಸರಣಿಯನ್ನು ಈ ಸಾಹಿತ್ಯಗಳಲ್ಲಿ ಕಾಣಬಹುದು. ಓದಿನ ಮೂಲಕ ಇವುಗಳನ್ನು ಅರ್ಥೈಸಿಕೊಂಡು ನಮ್ಮದಾಗಿಸಿಕೊಳ್ಳಬಹುದು,” ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಕಾಲೇಜಿನ ಪ್ರಾಂಶುಪಾಲ ಡಾ. ಮೀನ ಜೆ. ಪಣಿಕ್ಕರ್ ಮಾತನಾಡಿ, “ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೆಚ್ಚುಗೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ದೃಷ್ಟಿಯಿಂದ ಈ ಕಾರ್ಯಕ್ರಮ ವಿಶಿಷ್ಟವಾದ ಪರಿಕಲ್ಪನೆಯಾಗಿದೆ,” ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, “ವಿದ್ಯಾರ್ಥಿಗಳಿಗೆ ತುಳು ಸಾಹಿತ್ಯದ ಪರಿಚಯ ನೀಡುವ ಆಶಯದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ,” ಎಂದರು.
ಕಾರ್ಯಕ್ರಮದಲ್ಲಿ ಮಸ್ಕತ್ ತುಳು ಕೂಟದ ಮಾಜಿ ಅಧ್ಯಕ್ಷ ದಯಾನಂದ ಕಾವೂರು, ಶಾರದಾ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಅಮಿತಾ ಆಳ್ವ, ವಿದ್ಯಾರ್ಥಿ ಸಂಚಾಲಕಿ ವರ್ಷ ವಿ.ಎಸ್. ಉಪಸ್ಥಿತರಿದ್ದರು.
ಅಕಾಡೆಮಿಯ ಸದಸ್ಯ ಪಾಂಗಾಳ ಬಾಬು ಕೊರಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಶಾರದಾ ಕಾಲೇಜಿನ 55 ಮಂದಿ ವಿದ್ಯಾರ್ಥಿಗಳು ಅಕಾಡೆಮಿಯ ಗ್ರಂಥಾಲಯದಲ್ಲಿ ತುಳು ಸಾಹಿತ್ಯ ಕೃತಿಗಳನ್ನು ಓದಿ, ಸಮಾರೋಪ ಕಾರ್ಯಕ್ರಮದಲ್ಲಿ ತಮ್ಮ ಓದಿನ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.





