ಮಂಗಳೂರು: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರಕಾರಕ್ಕೆ ನೆರವಾಗಲು, ರಾಜ್ಯದಲ್ಲಿ 1974 ರಲ್ಲಿ ಸ್ಥಾಪಿಸಲಾಗಿದ್ದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿ ಸಿ ಆರ್ ಇ) ವನ್ನು 33 ವಿಶೇಷ ಪೊಲೀಸ್ ಠಾಣೆಗಳನ್ನಾಗಿ ಪರಿವರ್ತಿಸಲು ಸರಕಾರ ಕೈಗೊಂಡಿರುವ ನಿರ್ಧಾರವನ್ನು ಸ್ವಾಗತಿಸಿರುವ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ – ಸಂಸ್ಥೆಗಳ ಮಹಾಒಕ್ಕೂಟವು, ಈ ಯೋಜನೆ ಕಾನೂನುಗಳ ಆಶಯದಂತೆ ಅನುಷ್ಠಾನಗೊಳ್ಳಲು ಈ ಎಲ್ಲ ವಿಶೇಷ ಪೊಲೀಸ್ ಠಾಣೆಗಳಿಗೆ ಸಾಕಷ್ಟು ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಮಾರ್ಚ್ 7 ರಂದು ಬಜೆಟ್ ಮಂಡನೆ ವೇಳೆ ಈ ವಿಷಯವನ್ನು ಪ್ರಕಟಿಸಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಇದಕ್ಕೆ ಕಾರಣ ಕರ್ತರಾದ ಸಮಾಜ ಕಲ್ಯಾಣ ಸಚಿವ ಡಾ. ಹೆಚ್ ಸಿ ಮಹದೇವಪ್ಪ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಮತ್ತು ಡಿ ಸಿ ಆರ್ ಇ ಇದರ ಹೆಚ್ಚುವರಿ ಮಹಾನಿರ್ದೇಶಕರನ್ನು ಮಹಾಒಕ್ಕೂಟ ಅಭಿನಂದಿಸಿದೆ.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನರ ವಿರುದ್ಧ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ದೂರು ದಾಖಲಿಸಿ, ನಿಗದಿತ ಅವಧಿಯಲ್ಲಿ ಸೂಕ್ತ ತನಿಖೆ ನಡೆಸಿ, ನ್ಯಾಯಾಲಯಗಳಿಗೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲು ಪ್ರತಿ ಜಿಲ್ಲೆಗೆ ಒಂದರಂತೆ ಹಾಗೂ ಬೆಂಗಳೂರು ನಗರಕ್ಕೆ 02 ರಂತೆ ರಾಜ್ಯದಲ್ಲಿ ಒಟ್ಟು 33 ಡಿ ಸಿ ಆರ್ ಇ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಮತ್ತು ಸದರಿ ಠಾಣೆಗಳ ನಿರ್ವಹಣೆಗಾಗಿ ರಾಜ್ಯದ ಡಿ ಸಿ ಆರ್ ಇ ಘಟಕದಲ್ಲಿ ಹಾಲಿ ಇರುವ 340 ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ 450 ವಿವಿಧ ವೃಂದದ ಹುದ್ದೆಗಳನ್ನು ಮಂಜೂರು ಮಾಡುವಂತೆ ಡಿ ಸಿ ಆರ್ ಇ ಇದರ ಎ ಡಿ ಜಿ ಪಿ 31.08.2023 ರಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯ ಬಗ್ಗೆ ದಿ. 20.06.2024 ಮತ್ತು ದಿ. 28.10.2024 ರಂದು ರಾಜ್ಯ ಸಚಿವ ಸಂಪುಟ ಚರ್ಚೆ ನಡೆಸಿ, ಈ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಬಹಳ ವರ್ಷ ಗಳಿಂದ ರಾಜ್ಯದ ದಲಿತ ಚಳುವಳಿ ಡಿ ಸಿ ಆರ್ ಇ ಗೆ ಪೊಲೀಸ್ ಠಾಣೆಯ ಸ್ಥಾನಮಾನ ನೀಡಬೇಕು ಎಂದು ಎಲ್ಲ ಸರಕಾರಗಳನ್ನು ಅಗ್ರಹಿಸುತ್ತಲೇ ಬಂದಿತ್ತು.
ರಾಜ್ಯದ ಈ 33 ವಿಶೇಷ ಪೊಲೀಸ್ ಠಾಣೆಗಳಲ್ಲಿ ಡಿವೈ ಎಸ್ ಪಿ ಗಳು ಠಾಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದು, ಗೃಹ ಇಲಾಖೆ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಮೇಲ್ಪಟ್ಟ ಅಧಿಕಾರಿಗಳನ್ನು ಈ ಠಾಣೆಗಳಿಗೆ ನಿಯುಕ್ತಿಗೊಳಿಸುವ ಮುನ್ನ ಸಮಾಜ ಕಲ್ಯಾಣ ಇಲಾಖೆಯ ಸಹಮತಿ ಪಡೆಯುವುದು ಕಡ್ಡಾಯವಾಗಿದೆ.
1955 ರ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ, 1989 ರ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ (ದೌರ್ಜನ್ಯ ತಡೆ) ಕಾಯ್ದೆ, 1990 ರ ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲಾತಿ ಮತ್ತಿತರೆ) ಕಾಯ್ದೆ, ಈ ಮೇಲಿನ ಕಾಯ್ದೆಗಳ ಉಲ್ಲಂಘನೆ ಮಾಡುವ ಇತರೆ ಯಾವುದೇ ಕಾಯಿದೆಗಳಲ್ಲಿ ಹೇಳಲಾದ ಅಪರಾಧಗಳ ಬಗ್ಗೆ ಹಾಗೂ ರಾಜ್ಯ ಸರಕಾರ ಅಥವಾ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಡಿ ಸಿ ಆರ್ ಇ ಗೆ ವಹಿಸಿ ಕೊಡುವ ಯಾವುದೇ ಪ್ರಕರಣಗಳ ಬಗ್ಗೆ ದೂರು ದಾಖಲಿಸಿ, ತನಿಖೆ ಮಾಡುವ, ಆರೋಪಿ ಗಳನ್ನು ಬಂಧಿಸುವ, ಆರೋಪ ಪಟ್ಟಿ ಸಲ್ಲಿಸುವ ಅಧಿಕಾರವನ್ನು ಈ ಠಾಣೆಗಳಿಗೆ ಪ್ರಸ್ತಾಪಿಸಲಾಗಿದೆ.
ದೌರ್ಜನ್ಯಕ್ಕೊಳಗಾದ ಸಂತ್ರಸ್ತರು ತಮ್ಮ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಬಹುದು, ಅಥವಾ ಜಿಲ್ಲಾ ಕೇಂದ್ರ ದಲ್ಲಿರುವ ಈ ವಿಶೇಷ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸ ಬಹುದು. ಸ್ಥಳೀಯ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಆಗಿದ್ದಲ್ಲಿ, ಅಲ್ಲಿನ ಪೊಲೀಸರು ಅದನ್ನು ತಕ್ಷಣವೇ ಈ ವಿಶೇಷ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಬೇಕು.
ಈ ಬಗ್ಗೆ ಅನುಬಂಧಗಳೊಂದಿಗೆ ವಿವರವಾದ ದಿ. 19.11.2024 ರಂದು ಸರಕಾರಿ ಆದೇಶ ಹೊರಡಿಸಿರುವ ಸಮಾಜ ಕಲ್ಯಾಣ ಇಲಾಖೆ, ಗೃಹ ಇಲಾಖೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 (BNSS Act, 2023) ರ ಕಲಂ 2(u) ರ ಅಡಿಯಲ್ಲಿ ಡಿ ಸಿ ಆರ್ ಇ ಇದರ 33 ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಅಧಿಸೂಚನೆ ಹೊರಡಿಸಲು ನಿರ್ದೇಶನ ನೀಡಿತ್ತು.
ಆಶಯ ವಿಫಲವಾದೀತೆ ಎಂಬ ಆತಂಕ:
ಡಿ ಸಿ ಆರ್ ಇ ಘಟಕಗಳನ್ನು ಪೊಲೀಸ್ ಠಾಣೆಗಳನ್ನಾಗಿ ಪರಿವರ್ತನೆ ಮಾಡುವ ಆಶಯ ಉತ್ತಮವಾದರೂ, ಅನುಷ್ಠಾನದಲ್ಲಿ ಯಾವುದೇ ಲೋಪವಾದರೆ, ಅದು ಪರಿಶಿಷ್ಟ ಜನ ಸಮುದಾಯಗಳ ಬದುಕಿನ ಮೇಲೆ ಅತ್ಯಂತ ಅಪಾಯಕಾರಿ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾದೀತು ಎಂದು ಮಹಾಒಕ್ಕೂಟ ಆತಂಕ ವ್ಯಕ್ತ ಪಡಿಸಿದೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2020ರಲ್ಲಿ 21 ದೌರ್ಜನ್ಯ ಪ್ರಕರಣಗಳು, 2021ರಲ್ಲಿ 24, 2022ರಲ್ಲಿ 19, 2023ರಲ್ಲಿ 37, 2024ರಲ್ಲಿ 21 ಮತ್ತು 2025 ರಲ್ಲಿ ಈ ವರೆಗೆ 5 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2020ರಲ್ಲಿ ಪುತ್ತೂರು ಉಪ ವಿಭಾಗದ ವ್ಯಾಪ್ತಿಯಲ್ಲಿ 20, ಬಂಟ್ವಾಳ ಉಪ ವಿಭಾಗದಲ್ಲಿ 13 ದೌರ್ಜನ್ಯ ಪ್ರಕರಣಗಳು, 2021ರಲ್ಲಿ ಪುತ್ತೂರು ಉ ವಿ ದಲ್ಲಿ 28 ಮತ್ತು ಬಂಟ್ವಾಳ ಉ ವಿ ದಲ್ಲಿ 19 ಪ್ರಕರಣಗಳು, 2022ರಲ್ಲಿ ಪುತ್ತೂರು ಉ ವಿ ದಲ್ಲಿ 27 ಮತ್ತು ಬಂಟ್ವಾಳ ಉ ವಿ ದಲ್ಲಿ 20 ಪ್ರಕರಣಗಳು, 2023 ರಲ್ಲಿ ಪುತ್ತೂರು ಉ ವಿ ದಲ್ಲಿ 29 ಮತ್ತು ಬಂಟ್ವಾಳ ಉ ವಿ ದಲ್ಲಿ 23 ಪ್ರಕರಣಗಳು, 2024ರಲ್ಲಿ ಪುತ್ತೂರು ಉ ವಿ ದಲ್ಲಿ 11 ಮತ್ತು ಬಂಟ್ವಾಳ ಉ ವಿ ದಲ್ಲಿ 21 ಪ್ರಕರಣಗಳು ಮತ್ತು 2025 ರಲ್ಲಿ ಈ ವರೆಗೆ ಪುತ್ತೂರು ಉ ವಿ ದಲ್ಲಿ 2 ಹಾಗೂ ಬಂಟ್ವಾಳ ಉ ವಿ ದಲ್ಲಿ 0 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.
ಈ ದೌರ್ಜನ್ಯ ಪ್ರಕರಣಗಳು ಅಲ್ಲದೆ, ಸುಳ್ಳು ಜಾತಿ ಸರ್ಟಿಫಿಕೇಟ್ ಪಡೆದ ಪ್ರಕರಣಗಳು, ಸರಕಾರಿ ಸೇವೆಗಳ ನೇಮಕಾತಿ ಮತ್ತು ಭಡ್ತಿಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳ ಸೇರ್ಪಡೆಯಲ್ಲಿ ಮೀಸಲಾತಿ ನೀತಿ ಉಲ್ಲಂಘನೆಯ ಪ್ರಕರಣಗಳು, ಪರಿಶಿಷ್ಟರಿಗೆ ಮೀಸಲಾದ ಅನುದಾನಗಳ ದುರ್ಬಳಕೆ ಪ್ರಕರಣಗಳು, ಪರಿಶಿಷ್ಟರ ಜಮೀನುಗಳ ಅಕ್ರಮ ಮಾರಾಟ, ಅತಿಕ್ರಮಣ ಪ್ರಕರಣಗಳು ಹೀಗೆ ಹಲವು ಗಂಭೀರ ಸ್ವರೂಪದ ಅಪರಾಧಗಳ ಬಗ್ಗೆ ದೂರು ದಾಖಲಿಸಿ, ತನಿಖೆ ನಡೆಸಿ, ಸಕಾಲದಲ್ಲಿ, ಎರಡು ತಿಂಗಳ ಒಳಗೆ, ನ್ಯಾಯಾಲಯಗಳಿಗೆ ಆರೋಪ ಪಟ್ಟಿಗಳನ್ನು ಸಲ್ಲಿಸಿ, ಅಪರಾಧಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸುವಂತೆ ಕಾರ್ಯ ನಿರ್ವಸುವುದು ಈ ವಿಶೇಷ ಪೊಲೀಸ್ ಠಾಣೆಗಳ ಹೊಣೆಗಾರಿಕೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯ 26 ಪೊಲೀಸ್ ಠಾಣಾವ್ಯಾಪ್ತಿಯ ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ ಸ್ವರೂಪದ ಪ್ರಕರಣಗಳನ್ನು ನಿರ್ವಹಿಸಬೇಕಾದ ಈ ಡಿ ಸಿ ಆರ್ ಇ ವಿಶೇಷ ಪೊಲೀಸ್ ಠಾಣೆಗೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ತಮ್ಮ ದಿ 21.01.2025 ರ ಪತ್ರದಲ್ಲಿ ಈ ಕೆಳಗಿನಂತೆ ಅಧಿಕಾರಿ – ಸಿಬ್ಬಂದಿಗಳ ನಿಯೋಜನೆಗೆ ಪ್ರಸ್ತಾಪಿಸಿದ್ದಾರೆ.
ಡಿವೈ ಎಸ್ ಪಿ -1, ಇನ್ಸ್ ಪೆಕ್ಟರ್ -1, ಸಬ್ ಇನ್ಸ್ ಪೆಕ್ಟರ್ -1, ಹೆಡ್ ಕಾನ್ ಸ್ಟೇಬಲ್ -3, ಕಾನ್ ಸ್ಟೇಬಲ್ -7. ಇಂತಹ ಗುರುತರವಾದ ಕಾರ್ಯವನ್ನು ಕೇವಲ ಇಷ್ಟೇ ಮಂದಿ ಅಧಿಕಾರಿಗಳು – ಸಿಬ್ಬಂದಿಗಳು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವೆ? ಇದು ಸರಕಾರ ಮತ್ತು ಸಮಾಜ, ಅದರಲ್ಲೂ ಮುಖ್ಯವಾಗಿ ಪರಿಶಿಷ್ಟ ಸಮುದಾಯಗಳು, ಗಂಭೀವಾಗಿ ಯೋಚಿಸ ಬೇಕಾದ ಪ್ರಶ್ನೆ.
ಆದ್ದರಿಂದ, ದ ಕ ಜಿಲ್ಲೆಗೆ ಓರ್ವ ಡಿವೈ ಎಸ್ ಪಿ ಜೊತೆಗೆ, ಕನಿಷ್ಟ ಇಬ್ಬರು ಇನ್ಸ್ ಪೆಕ್ಟರುಗಳು, ನಾಲ್ವರು ಎಸ್ ಐ ಗಳು, ಇಬ್ಬರು ಮಹಿಳಾ ಹೆಚ್ ಸಿ ಸಹಿತ ಆರು ಹೆಚ್ ಸಿ ಗಳು, ಐವರು ಮಹಿಳಾ ಪಿ ಸಿ ಸಹಿತ ಕನಿಷ್ಟ 20 ಪಿ ಸಿ ಗಳು, ಅಗತ್ಯ ಕಂಪ್ಯೂಟರ್ ಗಳು ಮತ್ತು ಕನಿಷ್ಟ ಇಬ್ಬರು ಕಂಪ್ಯೂಟರ್ ಆಪರೇಟರ್ ಗಳು, ಕನಿಷ್ಟ ನಾಲ್ಕು ಜೀಪುಗಳು, ಹಾಗೂ ಪೊಲೀಸ್ ಠಾಣೆಯಾಗಿ ಕರ್ತವ್ಯ ನಿರ್ವಹಿಸಲು ಸಾಕಷ್ಟು ಸ್ಥಳಾವಕಾಶ ಇರುವ ಕಟ್ಟಡ ಅತ್ಯಗತ್ಯ. ಇದನ್ನು ಸರಕಾರ ಆದ್ಯತೆಯ ಮೇರೆಗೆ ಮಾಡಲು ಆಡಳಿತಾತ್ಮಕ ಕ್ರಮದ ಜೊತೆಗೆ ಬಜೆಟ್ (ಪೂರಕ ಬಜೆಟ್) ನಲ್ಲಿ ಅಗತ್ಯದ ಅನುದಾನವನ್ನೂ ಮಾನ್ಯ ಮುಖ್ಯ ಮಂತ್ರಿಗಳು ಒದಗಿಸ ಬೇಕು ಮಹಾ ಒಕ್ಕೂಟ ಆಗ್ರಹಿಸಿದೆ. ಇಲ್ಲದಿದ್ದಲ್ಲಿ ಈ ಶೋಷಿತ ಸಮುದಾಯಗಳ ಸಂರಕ್ಷಣೆಯಲ್ಲಿ ಆಘಾತಕಾರಿಯಾದ ಪರಿಣಾಮಗಳಿಗೆ ಈ ವಿಶೇಷ ಪೊಲೀಸ್ ಠಾಣೆಗಳೇ ಕಾರಣವಾಗಬಹುದು ಎಂದು ಆತಂಕ ವ್ಯಕ್ತ ಪಡಿಸಿದೆ.
ದೌರ್ಜನ್ಯ ಜಾಗೃತಿ ಸಮಿತಿ ಬದಲಿಸಿ:
ಪರಿಶಿಷ್ಟ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಪರಿಣಾಮಕಾರಿ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷ ತೆಯಲ್ಲಿ ಕಾರ್ಯ ನಿರ್ವಹಿಸಬೇಕಾದ ಜಿಲ್ಲಾ ದೌರ್ಜನ್ಯ ತಡೆ ಜಾಗ್ರತೆ ಮತ್ತು ಉಸ್ತುವಾರಿ ಸಮಿತಿಯು, ಕಾನೂನು ನಿಯಮಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವ, ಸಾಮಾಜಿಕ ಬದ್ಧತೆ ಮತ್ತು ಕಾಳಜಿ ಇರುವ ವ್ಯಕ್ತಿಗಳನ್ನು ಒಳಗೊಂಡಿರ ಬೇಕು. ಆದರೆ ನಮ್ಮ ಜಿಲ್ಲೆಯಲ್ಲಿ ಪರಿಸ್ಥಿತಿ ಭಿನ್ನ ಇರುವುದರಿಂದ, ಅದನ್ನು ಬದಲಿಸಲು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ
ಅಧ್ಯಕ್ಷರಾದ ಲೋಲಾಕ್ಷ ತಿಳಿಸಿದರು.
