ಮಂಗಳೂರು ನಗರದಲ್ಲಿ ಮಾದಕವಸ್ತುಗಳ ವಿರುದ್ಧ ನಗರ ಪೊಲೀಸ್ ಇಲಾಖೆ ನಡೆಸುತ್ತಿರುವ ನಿರಂತರ ಕಾರ್ಯಾಚರಣೆ ಗಮನಾರ್ಹ ಯಶಸ್ಸು ದಾಖಲಿಸಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಹೈಡೋವೀಡ್ ಗಾಂಜಾ, ಚರಸ್ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಪೆಡ್ಲರ್ಗಳನ್ನು ಬಂಧಿಸಿ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಈ ಕಾರ್ಯಾಚರಣೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ಇದೀಗ ಅದರ ಮುಂದುವರಿದ ಭಾಗವಾಗಿ, ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಮೇಲೆ ಅಚ್ಚರಿಯ ಮಾದಕವಸ್ತು ತಪಾಸಣೆಯನ್ನು ನಡೆಸಲಾಗಿದೆ. ಕಾಲೇಜು ಹಾಗೂ ಖಾಸಗಿ ಬಸ್ಗಳನ್ನು ತಡೆದು ವಿದ್ಯಾರ್ಥಿಗಳನ್ನು ಪರೀಕ್ಷಿಸುವ ಮೂಲಕ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು. ಒಟ್ಟು ಸುಮಾರು 200 ವಿದ್ಯಾರ್ಥಿಗಳ ಮೇಲೆ ಪರೀಕ್ಷೆ ನಡೆಸಲಾಗಿದ್ದು, ಫಲಿತಾಂಶಗಳು ಹಿಂದಿನ ಪ್ರಕರಣಗಳಿಗಿಂತ ಉತ್ತಮವಾಗಿವೆ ಎಂದು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ACP CEN ಹಾಗೂ ACP ಸೌತ್ ಅವರ ಮೇಲ್ವಿಚಾರಣೆಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಇಂತಹ ಅಪ್ರತೀಕ್ಷಿತ ತಪಾಸಣೆಗಳನ್ನು ಮುಂದಿನ ದಿನಗಳಲ್ಲಿಯೂ ನಿಯಮಿತವಾಗಿ ಮುಂದುವರಿಸಲಾಗುವುದು ಎಂದು ಅವರು ಹೇಳಿದರು. ಈ ತಪಾಸಣೆಗಳು ಮಾದಕ ವ್ಯಸನದ ವಿರುದ್ಧ ಬಲವಾದ ನಿರೋಧಕವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ಆರಂಭಿಕ ಹಂತದಲ್ಲೇ ವ್ಯಸನಿಗಳನ್ನು ಗುರುತಿಸಿ ಚಟದಿಂದ ದೂರವಿರಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಪಿ.ಎ. ಕಾಲೇಜಿನ ಎರಡು ಬಸ್ಗಳನ್ನು ತಡೆದು 87 ವಿದ್ಯಾರ್ಥಿಗಳ ಮೇಲೆ ಮಾದಕವಸ್ತು ಪರೀಕ್ಷೆ ನಡೆಸಲಾಗಿದ್ದು, ಎಲ್ಲ ಫಲಿತಾಂಶಗಳು ನಕಾರಾತ್ಮಕವಾಗಿ ಬಂದಿರುವುದು ಅತ್ಯಂತ ಉತ್ತಮ ಬೆಳವಣಿಗೆಯಾಗಿದೆ ಎಂದು ಆಯುಕ್ತರು ಅಭಿಪ್ರಾಯಪಟ್ಟರು.
ಉಳ್ಳಾಲ ವಲಯದಲ್ಲಿ ಖಾಸಗಿ ಹಾಗೂ ಕಾಲೇಜು ಬಸ್ಗಳಿಂದ ಯಾದೃಚ್ಛಿಕವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಕೆ.ಎಸ್. ಹೆಗ್ಡೆ ವೈದ್ಯಕೀಯ ವಿಶ್ವವಿದ್ಯಾಲಯ, ಕಣಚೂರು ಸಂಸ್ಥೆ, ಪಿ.ಎ. ಕಾಲೇಜು, ಸೆಂಟ್ ಅಲೋಶಿಯಸ್ ಕಾಲೇಜು ಹಾಗೂ ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ತಪಾಸಣೆಗೆ ಒಳಗಾಗಿದ್ದಾರೆ. ಇದುವರೆಗೆ 103 ಪರೀಕ್ಷೆಗಳು ಪೂರ್ಣಗೊಂಡಿದ್ದು, ಅವುಗಳಲ್ಲಿ 101 ನಕಾರಾತ್ಮಕ ಫಲಿತಾಂಶಗಳು ಲಭ್ಯವಾಗಿವೆ. ಇನ್ನೂ 10 ಪರೀಕ್ಷೆಗಳು ಪ್ರಗತಿಯಲ್ಲಿದ್ದು, ಒಟ್ಟು 200 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಬ್ಬ ವಿದ್ಯಾರ್ಥಿ ಮಾತ್ರ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಘಟನೆ ವರದಿಯಾಗಿದ್ದು, ಒಟ್ಟಾರೆ ಕಾರ್ಯಾಚರಣೆಯ ಫಲಿತಾಂಶಗಳು ಉತ್ತೇಜನಕಾರಿಯಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಹೇಳಿದರು.
“ಮಾದಕವಸ್ತು ಮುಕ್ತ ಮಂಗಳೂರು ಹಾಗೂ ಮಾದಕವಸ್ತು ಮುಕ್ತ ಶೈಕ್ಷಣಿಕ ಕ್ಯಾಂಪಸ್ಗಳ ನಿರ್ಮಾಣ ನಮ್ಮ ಗುರಿ. ಈ ದಿಕ್ಕಿನಲ್ಲಿ ಪೊಲೀಸ್ ಇಲಾಖೆ ತನ್ನ ಪ್ರಯತ್ನಗಳನ್ನು ಇನ್ನಷ್ಟು ಬಲಪಡಿಸಲಿದೆ” ಎಂದು ಅವರು ಸ್ಪಷ್ಟಪಡಿಸಿದರು.



