ಗಣರಾಜ್ಯೋತ್ಸವದಂತಹ ಪವಿತ್ರ ದಿನ ಆಚರಿಸಲು ದೇಶದೆಲ್ಲೆಡೆ ತಯಾರಿ ನಡೆಸುತ್ತಿರುವ ದಿನ 25-01-2026 ರಂದು ದೇಶಕ್ಕಾಗಿ ಯುದ್ಧಭೂಮಿಯಲ್ಲಿ ಗಾಯಗೊಂಡ ನಿವೃತ್ತ ಸೈನಿಕನಿಗೆ ಟೋಲ್ ವಿನಾಯಿತಿ ನಿರಾಕರಿಸಿದ ಅಮಾನವೀಯ ಘಟನೆ ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸಾಸ್ತಾನ ಟೋಲ್ ಮೂಲಕ ಪ್ರಯಾಣಿಸುತ್ತಿದ್ದ ನಿವೃತ್ತ ಸೈನಿಕ ಶ್ಯಾಮರಾಜ್ ಅವರಿಗೆ ಅಧಿಕೃತ ಟೋಲ್ ವಿನಾಯಿತಿ ಪತ್ರವಿದ್ದರೂ, ಟೋಲ್ ಸಿಬ್ಬಂದಿ ವಿನಾಯಿತಿ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ದೇಶದ ಬಹುತೇಕ ಟೋಲ್ ಪ್ಲಾಜಾಗಳಲ್ಲಿ ಅನಾಯಾಸವಾಗಿ ದೊರೆಯುವ ಈ ಸೌಲಭ್ಯ, ಸಾಸ್ತಾನದಲ್ಲಿ ಮಾತ್ರ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಶ್ಯಾಮರಾಜ್ ಆರೋಪಿಸಿದ್ದಾರೆ.
ಕಾಸರಗೋಡು ಜಿಲ್ಲೆಯವರಾದ ಶ್ಯಾಮರಾಜ್ ಅವರು ಭಾರತೀಯ ಸೇನೆಯ 21ನೇ ಪ್ಯಾರಾ ಸ್ಪೆಷಲ್ ಫೋರ್ಸ್ನ ಪ್ಯಾರಾಟೂಪರ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಪತ್ನಿ ಮಿಲಿಟರಿ ನರ್ಸಿಂಗ್ ವಿಭಾಗದಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೋಸ್ಟಿಂಗ್ ಸಂಬಂಧಿತ ಪ್ರಯಾಣದ ವೇಳೆ RMA ನೀಡಿದ ಅಧಿಕೃತ ಟೋಲ್ ವಿನಾಯಿತಿ ಪತ್ರವನ್ನು ತೋರಿಸಿದರೂ ಸಿಬ್ಬಂದಿ ಒಪ್ಪಿಕೊಳ್ಳಲಿಲ್ಲ ಎನ್ನಲಾಗಿದೆ.
ಆಪರೇಶನ್ ಪರಾಕ್ರಮ್ ವೇಳೆ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಗಿಸಿ ವಾಪಸ್ಸಾಗುವ ಸಂದರ್ಭದಲ್ಲಿ ಶ್ಯಾಮರಾಜ್ ಅವರ ವಾಹನ ಲ್ಯಾಂಡ್ಮೈನ್ ಸ್ಫೋಟಕ್ಕೆ ಒಳಗಾಗಿತ್ತು. ಈ ಭೀಕರ ದುರಂತದಲ್ಲಿ 15 ಸೈನಿಕರು ಹುತಾತ್ಮರಾಗಿದ್ದು, ಬದುಕುಳಿದ ಇಬ್ಬರಲ್ಲಿ ಶ್ಯಾಮರಾಜ್ ಒಬ್ಬರು. ಗಂಭೀರ ಗಾಯಗಳಿಂದಾಗಿ ಅವರು ಇಂದು ಸಂಪೂರ್ಣ ವಿಕಲಾಂಗ ಸ್ಥಿತಿಗೆ ತಲುಪಿದ್ದಾರೆ.
ಘಟನೆಯ ವಿಡಿಯೋ ವೈರಲ್ ಆದ ಬಳಿಕ ಟೋಲ್ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ. ಆದರೆ, ಗಣರಾಜ್ಯೋತ್ಸವದ ದಿನವೇ ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟ ವೀರ ಸೈನಿಕನಿಗೆ ಈ ರೀತಿಯ ವರ್ತನೆ ನಡೆದಿರುವುದು ಜನಸಾಮಾನ್ಯರ ಮನಸ್ಸಿಗೆ ತೀವ್ರ ನೋವು ತಂದಿದ್ದು, ಟೋಲ್ ವ್ಯವಸ್ಥೆಯ ಮೇಲ್ವಿಚಾರಣೆ ಮತ್ತು ಸ್ಪಷ್ಟ ಮಾರ್ಗಸೂಚಿಗಳ ಜಾರಿಗೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಮತ್ತು ಉಡುಪಿ ಜಿಲ್ಲಾದ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.


