ಉಳ್ಳಾಲ: ಪ್ರೇಮ ವೈಫಲ್ಯದಿಂದ ಯುವಕನೋರ್ವ ಆತ್ಮಹತ್ಯೆ ನಡೆಸಿರುವ ಘಟನೆ ಮಂಗಳೂರು ಹೊರ ವಲಯದ ಕುತ್ತಾರಿನ ಸಂತೋಷನಗರ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಸಂತೋಷ್ ನಗರದ ಬಾಡಿಗೆ ಮನೆಯಲ್ಲಿ ಯುವಕ ಒಂಟಿಯಾಗಿದ್ದ ಸಂದರ್ಭ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ದೀಕ್ಷಿತ್ ನಿನ್ನೆಯೂ ಸಂಜೆವರೆಗೆ ಕರ್ತವ್ಯ ನಿರ್ವಹಿಸಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಪ್ರೇಮವೈಫಲ್ಯ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೂಲತಃ ಕಂಕನಾಡಿ ಬೈಪಾಸ್ ನ ಕದ್ಕೋರಿ ಗುಡ್ಡೆಯ ದೀಕ್ಷಿತ್ ಕುಟುಂಬ ಕೆಲ ಸಮಯದಿಂದ ಸಂತೋಷ್ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದೀಕ್ಷಿತ್ ನಿನ್ನೆ ಸಂಜೆ ತಾಯಿಯೊಂದಿಗೆ ಕುತ್ತಾರಿನ ಸಂಬಂಧಿಕರ ಮನೆಯಲ್ಲಿದ್ದು, ಈ ವೇಳೆ ಮನೆಗೆ ಹೋಗಿ ಬರುತ್ತೇನೆಂದು ಓರ್ವನೇ ಸಂತೋಷ್ ನಗರದ ಬಾಡಿಗೆ ಮನೆಗೆ ತೆರಳಿದ್ದನಂತೆ. ಬಳಿಕ ಮನೆಯ ಕೋಣೆಯ ಸಿಲಿಂಗ್ ಫ್ಯಾನಿಗೆ ದೀಕ್ಷಿತ್ ನೇಣು ಬಿಗಿದು ಆತ್ಮ ಹತ್ಯೆಗೈದಿರುವುದು ರಾತ್ರಿ ವೇಳೆ ಕಂಡುಬಂದಿದೆ. ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗುತ್ತಿದೆ.