ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್ ಆಕಸ್ಮಿಕವಾಗಿ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ನ.13ರ ಶನಿವಾರದಂದು ಅತ್ತಾವರ ಕಾಪ್ರಿಗುಡ್ಡೆಯ S L Mathias ರಸ್ತೆಯ ಮುಂಭಾಗ ಕಟ್ಟಡದಲ್ಲಿ ನಡೆದಿದೆ.
ಮೃತರನ್ನು ಜೆಪ್ಪು ನಿವಾಸಿ ಹಮೀದ್ ಎಂಬವರ ಪುತ್ರ ಅಬ್ದರ್ರಹ್ಮಾನ್ ರಿಲ್ವಾನ್ (30) ಎಂದು ಗುರುತಿಸಲಾಗಿದೆ.
ಶನಿವಾರ ರಾಜಸ್ಥಾನದಿಂದ ಅತ್ತಾವರಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಲಾರಿ ಬಂದಿತ್ತು. ಈ ಸಂದರ್ಭ ಕಟ್ಟಡದ ರೈಟರ್ ಆಗಿದ್ದ ರಿಲ್ವಾನ್ ಅವರಲ್ಲಿ ಗ್ರಾನೈಟ್ನ ಫೋಟೋ ತೆಗೆಯಲು ಕಟ್ಟಡದ ಸೂಪರ್ ವೈಸರ್ ಸೂಚಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ರಿಲ್ವಾನ್ ಫೋಟೋ ತೆಗೆಯಲು ಲಾರಿಯ ಹಿಂಬದಿಗೆ ತೆರಳಿದ್ದಾರೆ ಎನ್ನಲಾಗಿದೆ. ಈ ವೇಳೆ ಲಾರಿಯಲ್ಲಿದ್ದ ಗ್ರಾನೈಟ್ ಏಕಾಏಕಿ ರಿಲ್ವಾನ್ ಅವರ ಮೇಲೆ ಬಿದ್ದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟ್ಟಡ ನಿರ್ಮಾಣ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೆ ಕಾರ್ಮಿಕನ ಸಾವಿಗೆ ಕಾರಣವಾದ ಕಟ್ಟಡ ನಿರ್ಮಾಣ ಮಾಲೀಕ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮೃತ ಕಾರ್ಮಿಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ತುಳುನಾಡ ರಕ್ಷಣಾ ವೇದಿಕೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಇದರ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪುರವರು ಆಗ್ರಹಿಸಿದ್ದಾರೆ. ಕ್ರಮ ಜರುಗಿಸುವಲ್ಲಿ ವಿಳಂಬವಾದ್ದಲ್ಲಿ, ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.