ಮಂಗಳೂರು: ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ಮೇಳ ಹಾಗೂ ಕಾಟಿಪಳ್ಳ ಮೇಳಗಳನ್ನು ಸಂಚಾಲಕನಾಗಿ ಒಂದೂವರೆ ದಶಕ ಮುನ್ನಡೆಸಿಕೊಂಡು ಬಂದಿದ್ದ ಯಕ್ಷಗಾನದ ಸಂಘಟಕ ದಿಲೀಪ್ ಸುವರ್ಣ (63) ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿಲೀಪ್ ತುಳು ಪ್ರಸಂಗಗಳಲ್ಲಿ ದೈವಗಳ ಪಾತ್ರ ನಿರ್ವಹಣೆಯಲ್ಲಿ ಪ್ರಬುದ್ದತೆಯನ್ನು ಸಾಧಿಸಿದ್ದರು. ಕುಳಾಯಿ ಮಾಧವ ಭಂಢಾರಿಯವರ ಪ್ರಸಂಗಗಳ ಪ್ರಥಮ ಪ್ರದರ್ಶನ ಸಂಘಟಿಸುವಲ್ಲಿ ವಿಶೇಷ ಆಸಕ್ತಿ ವಹಿಸುತ್ತಿದ್ದರು. ಶಾಲಾ ವಾಹನದ ಬಸ್ ಮಾಲಕರಾಗಿ ಉದ್ಯಮ ನಡೆಸುತ್ತಿದ್ದಾಗ ಯಕ್ಷಗಾನದ ಸೆಳೆತದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರೂ ಯಕ್ಷಗಾನದ ಒಲವನ್ನು ದೂರೀಕರಿಸದ ಯಕ್ಷಪ್ರೇಮಿಯಾಗಿ ಕಲಾವಿದರೆಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಮೊನ್ನೆ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಪಟ್ಲ ಸಂಭ್ರಮದಲ್ಲಿ ಪಟ್ಲ ಟ್ರಸ್ಟ್ ನ ಸಹಾಯ ಧನವನ್ನು ಉತ್ಸಾಹದಿಂದ ಸ್ವೀಕರಿಸಿದ್ದರು. ಮೃತರ ಅಂತ್ಯ ಸಂಸ್ಕಾರ ನಾಳೆ ಬೆಳಿಗ್ಗೆ 10.30 ಕ್ಕೆ ಸುರತ್ಕಲ್ ನಲ್ಲಿ ನಡೆಯಲಿದೆ ಎಂದು ಅವರ ಸುಪುತ್ರ ಪ್ರಶಾಂತ್ ತಿಳಿಸಿದ್ದಾರೆ.