ಮಂಗಳೂರು: ಪ್ರಾಧ್ಯಾಪಕರೋರ್ವರಿಂದ ಮಾನಸಿಕ ಕಿರಿಕಿರಿಯಾಗುತ್ತಿದೆ ಎಂದು ಡೆತ್ ನೋಟ್ ಬರೆದಿಟ್ಟು ನಗರದ ಕಾಲೇಜೊಂದರ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ನಗರದ ಹೊಟೇಲ್ ಮ್ಯಾನೇಜ್ಮೆಂಟ್ ಕಾಲೇಜು ವಿದ್ಯಾರ್ಥಿ, ಮೂಲತಃ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆ ನಿವಾಸಿ ಭರತ್(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ವಿದ್ಯಾರ್ಥಿ ಭರತ್ ತಾನು ವಾಸವಾಗಿದ್ದ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಅದಕ್ಕಿಂತ ಮೊದಲು ಆತ ತನ್ನ ತಾಯಿಗೆ ಕರೆ ಮಾಡಿದ್ದಾನೆ. ಆದರೆ ಅವರಿಗೆ ಕರೆ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಅವರ ವಾಟ್ಸ್ಆ್ಯಪ್ ನಂಬರ್ ಗೆ ”ಕಾಲೇಜಿನ ಪ್ರಾಧ್ಯಾಪಕರೊಬ್ಬರು ತಾನು ಮಾಡಿದ ಪ್ರಾಜೆಕ್ಟ್ ವರ್ಕ್ ಸರಿಯಿಲ್ಲವೆಂದು ಸಹಿ ಮಾಡದೆ ಕಿರಿ ಕಿರಿ ಮಾಡಿದ್ದರು. ಅಲ್ಲದೆ ಮನಸ್ಸಿಗೆ ನೋವಾಗುವಂತೆ ವರ್ತಿಸಿ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಆದ್ದರಿಂದ ತಾನು ಈ ಲೋಕವನ್ನು ತ್ಯಜಿಸುತ್ತಿದ್ದೇನೆ” ಎಂದು ವಿದ್ಯಾರ್ಥಿ ಭರತ್ ಮೆಸೇಜ್ ಮಾಡಿದ್ದಾನೆ. ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಂದು ಮಂಗಳೂರಿಗೆ ಬಂದಿರುವ ಭರತ್ ಹೆತ್ತವರು ತಮ್ಮ ಮಗನ ಸಾವಿಗೆ ಕಾರಣನಾದ ಪ್ರಾಧ್ಯಾಪಕ ಮತ್ತು ಕಾಲೇಜು ಅಧ್ಯಕ್ಷರ ಮೇಲೂ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ನ್ಯಾಯ ದೊರಕಿಸಕೊಡಬೇಕೆಂದು ಉರ್ವ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.