ಬಂಟ್ವಾಳ: ಬಂಟ್ವಾಳ ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವು ಹೊಕ್ಕಾಡಿಗೋಳಿಯಲ್ಲಿ ಡಿ. 5ರಂದು ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ನೋಣಾಲ್ಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ ಗಂಟೆ 7ಕ್ಕೆ ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಕಂಬಳ ಉದ್ಘಾಟಿಸಲಿರುವರು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು ಹಾಗೂ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿರುವರು.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ರಾಜ್ಯ ಗೃಹಮಂತ್ರಿಅರಗ ಜ್ಞಾನೇಂದ್ರ , ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆನಂದ ಸಿಂಗ್, ಇಂಧನ ಸಚಿವ ವಿ.ಸುನಿಲ್ ಕುಮಾರ್, ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ, ಚಲನಚಿತ್ರ ನಿರ್ದೇಶಕರಾದ ರಾಜೇದ್ರ ಸಿಂಗ್ ಬಾಬು, ವಿಜಯ ಕುಮಾರ್ ಕೋಡಿಯಾಲ್ಬಲ್, ಶಾಸಕರಾದ ಹರೀಶ್ಪೂಂಜ, ಉಮಾನಾಥ ಕೋಟ್ಯಾನ್, ಡಾ| ಭರತ್ ಶೆಟ್ಟಿ, ಪ್ರತಾಪ ಸಂಹ ನಾಯಕ್, ಹರೀಶ್ ಕುಮಾರ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿರುವರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತಾ ಪೂಜಾರಿ, ಡಾ| ಪ್ರಭಾಚಂದ್ರ ಜೈನ್, ಪ್ರಭಾಕರ ಪ್ರಭು, ಶ್ರೀನಿವಾಸ ಆಳ್ವ, ಗೋಪಾಲಕೃಷ್ಣ ಚೌಟ ಅವರು ಭಾಗವಹಿಸಲಿರುವರು.
ಇತಿಹಾಸ ಪ್ರಸಿದ್ಧ ಪೂಂಜ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಹೊಕ್ಕಾಡಿಗೋಳಿ ವೀರ ವಿಕ್ರಮ ಕಂಬಳಕ್ಕೆ ಧಾರ್ಮಿಕ ನಂಟು ಹೊಂದಿದ್ದು ಸಾಂಪ್ರದಾಯಿಕ ಕಂಬಳವೆಂದು ಗುರುತಿಸಿಕೊಂಡಿದೆ.
ಈ ಬಾರಿ ಒಟ್ಟು 125 ಕ್ಕೂ ಮಿಕ್ಕಿ ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಜಿಲ್ಲಾ ಕಂಬಳ ಸಮಿತಿಯ ಮಾರ್ಗದರ್ಶನದಲ್ಲಿ ಅಹಿಂಸಾತ್ಮಕವಾಗಿ ಕಂಬಳ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
©2021 Tulunada Surya | Developed by CuriousLabs