ಉಡುಪಿ: 2021 ರ ಎರಡನೇ ಕೋವಿಡ್ ಅಲೆಯಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಬಹಳಷ್ಟು ಹೊಡೆತ ಬಿದ್ದಿದೆ. ವಿದ್ಯಾರ್ಥಿಗಳು ಶಿಕ್ಷಕರು, ಸರ್ಕಾರದ ಅವೈಜ್ಞಾನಿಕ ನೀತಿಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಈ ಸಮಸ್ಯೆಯನ್ನು ನಾವು ಕಾಣಬಹುದು.ಸರ್ಕಾರ ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಯ ನಡುವಿನ ಸಮನ್ವಯದ ಕೊರತೆಯಿಂದಾಗಿ ಶಾಲಾ ಶಿಕ್ಷಕರು ಸೂಕ್ತ ಸಮಯಕ್ಕೆ ಸಂಬಳ ಸಿಗದೆ ಕಂಗಾಲಾಗಿದ್ದಾರೆ.
ವಿದ್ಯಾರ್ಥಿಗಳು ಶೈಕ್ಷಣಿಕ ಪಠ್ಯ ಕ್ರಮದಿಂದಲೂ ವಂಚಿತರಾಗುತ್ತಿದ್ದಾರೆ. ಸರ್ಕಾರ ಆನ್ ಲೈನ್ ಶಿಕ್ಷಣವನ್ನು ಆರಂಭಿಸಿದರೂ, ಸೂಕ್ತ ವ್ಯವಸ್ಥೆಯಿಲ್ಲದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳು ಶೈಕ್ಷಣಿಕ ಚಟುವಟಿಕೆಗಳನ್ನು ತೊರೆದು ಬಾಲ ಕಾರ್ಮಿಕದಂತಹ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
ಇನ್ನು ಮನೆಯಲ್ಲಿ ಇರುವ ವಿದ್ಯಾರ್ಥಿಗಳು ಬಹಳಷ್ಟು ಮಾನಸಿಕ ಒತ್ತಡಕ್ಕೂ ತುತ್ತಾಗುತ್ತಿದ್ದಾರೆ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಈ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಎಸ್ ಐ ಓ ಉಡುಪಿ ಜಿಲ್ಲೆ ಆಗ್ರಹಿಸಿದೆ. ಖಾಸಗಿ ಶಾಲಾ ಶಿಕ್ಷಕರಿಗೆ ಸಂಬಳ ಪ್ರತಿ ತಿಂಗಳು ನೀಡಬೇಕು,ಕೆಲವು ಖಾಸಗಿ ಶಾಲೆಗಳು ಕೋವಿಡ್ ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕೆಲಸದಿಂದ ವಜಾಗೊಳಿಸುವಂತಹ ಅಮಾನವೀಯ ಕೆಲಸಗಳನ್ನು ಮಾಡುತ್ತಿದ್ದು ಸರ್ಕಾರ ಮಧ್ಯ ಪ್ರವೇಶಿಸಿ ಇದನ್ನು ಕೂಡಲೇ ನಿಲ್ಲಿಸಬೇಕು.
ಸರ್ಕಾರ ಆನ್ ಲೈನ್ ಶಿಕ್ಷಣ ಆರಂಭಿಸುವ ಮುನ್ನ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣಕ್ಕೆ ಬೇಕಾಗಿರುವ ಮೊಬೈಲ್ ಮತ್ತು ನೆಟ್ ವರ್ಕ್ ವ್ಯವಸ್ಥೆಯನ್ನು ಕಲ್ಪಿಸಬೇಕು,ಸರ್ಕಾರ ಶಾಲಾ ಮಕ್ಕಳಿಗೆ ಒದಗಿಸುವ ಪಠ್ಯ ಪುಸ್ತಗಳನ್ನು ಸೂಕ್ತ ಸಮಯಕ್ಕೆ ಒದಗಿಸಬೇಕು.ಕೋವಿಡ್ ಸಂದರ್ಭದಲ್ಲಿ ಹಲವು ಮಕ್ಕಳು, ಮುಖ್ಯವಾಗಿ ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣ ವಂಚಿತರಾಗುತ್ತಿರುವುದು ಮೋಲ್ನೋಟಕ್ಕೆ ಕಂಡುಬರುತ್ತಿದೆ. ಸರಕಾರ ಈ ಬಗ್ಗೆ ಸರ್ವೆ ನಡೆಸಿ ಒಂದು ಮಗು ಕೂಡ ಶಿಕ್ಷಣ ವಂಚಿತರಾಗದಂತೆ ಕ್ರಮ ವಹಿಸಬೇಕು ಎಂದು ಎಸ್ ಐಒ ಆಗ್ರಹಿಸಿದೆ.