ಮಂಗಳೂರು: ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಮಂಗಳೂರಿನ ಜಪ್ಪು ಮಹಾಕಾಳಿಪಡ್ಪು ಬಳಿ ನಡೆದಿದೆ.
ವಸಂತಿ (50) ಮತ್ತು ಪ್ರೇಮಾ (48) ಮೃತಪಟ್ಟವರು. ಬೀಡಿ ಕಾರ್ಮಿಕರಾಗಿದ್ದ ಇವರಿಬ್ಬರು ದಿನನಿತ್ಯ ಕುಡುಪ್ಪಾಡಿ ದೋಟ ಎಂಬಲ್ಲಿಂದ ಮಹಾಕಾಳಿಪಡ್ಪುವಿನಲ್ಲಿರುವ ಬ್ರ್ಯಾಂಚ್ ಗೆ ರೈಲು ಹಳಿಯನ್ನು ದಾಟಿ ಬೀಡಿ ಕೊಂಡೊಯ್ಯುತ್ತಿದ್ದರು. ಅದರಂತೆ ಇಂದು ಬೆಳಗ್ಗೆಯೂ ಹಳಿ ದಾಟುತ್ತಿದ್ದಾಗ ಕೇರಳ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ರೈಲಿನಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ಹಳಿ ದಾಟುತ್ತಿದ್ದ ವೇಳೆ ರೈಲು ಬರುತ್ತಿದ್ದದು ಮಹಿಳೆಯರ ಗಮನಕ್ಕೆ ಬಂದಿರಲಿಲ್ಲ. ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.